ಗದಗ: ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕೆಲವು ರಸ್ತೆ ಹಾಗೂ ಪ್ರವಾಸಿ ತಾಣಗಳು ಖಾಲಿ ಖಾಲಿಯಾಗಿವೆ.
ನಗರದ ಭೀಷ್ಮಕೆರೆ ಆವರಣದಲ್ಲಿ ನಿರ್ಮಾಣವಾಗಿರುವ 116 ಅಡಿ ಎತ್ತರದ ವಿಶ್ವಗುರು ಬಸವಣ್ಣ ಪುತ್ಥಳಿ ವೀಕ್ಷಣೆಗೆ ಪ್ರತಿದಿನ ನೂರಾರು ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದರು. ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಿದ್ದು, ಈ ಸಂದರ್ಭದಲ್ಲಿ ಜನಜಂಗುಳಿಯಿಂದ ಕೂಡಿರುತಿತ್ತು.
116 ಅಡಿ ಎತ್ತರದ ಮೂರ್ತಿ ನೋಡುವುದರ ಜೊತೆಗೆ ಪುತ್ಥಳಿ ಕೆಳಭಾಗದಲ್ಲಿನ ಬಸವಣ್ಣನವರ ಜೀವನ ಚರಿತ್ರೆ, ಚಿತ್ರಗಳು, ಮನಸ್ಸಿಗೆ ಮೃದು ನೀಡುವ ಉದ್ಯಾನವನ, ಕೈಗೆಟುಕವ ರೀತಿಯಲ್ಲಿರುವ ಕೆರೆ ನೀರು, ಮಕ್ಕಳು ಆಟವಾಡಲು ಮೈದಾನ, ಮಕ್ಕಳ ಉದ್ಯಾನವನ ಸಹ ಇಲ್ಲಿದೆ.
ನಿತ್ಯ ಈ ಗಾರ್ಡನ್ನಲ್ಲಿ ಮಕ್ಕಳು, ಮಹಿಳೆಯರಿಂದ ತುಂಬಿ ತುಳುಕುತಿತ್ತು. ಕೆಲವರು ಕುಟುಂಬ ಸಮೇತ ಬಂದು ಬಸವಣ್ಣ ಪುತ್ಥಳಿ ನೋಡಿಕೊಂಡು ನಂತರ ಉಪಹಾರ ಸೇವಿಸಿ ಖುಷಿ ಖುಷಿಯಾಗಿ ಹೋಗುತ್ತಿದ್ದರು. ಆದರೆ ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಯಾರು ಮನೆಯಿಂದ ಹೊರ ಬಂದಿಲ್ಲ. ಎಲ್ಲವೂ ಖಾಲಿ ಖಾಲಿ ಗೋಚರವಾಗುತ್ತಿದೆ.
ಸಿಬ್ಬಂದಿ ಮಾತ್ರ ಕಸ ಕಡ್ಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಗ್ರಹಣ ವೇಳೆ ಕೆಲವರು ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ರೆ, ಇನ್ನು ಕೆಲವರು ಮನೆಯಿಂದ ಹೊರಹೋಗದಂತೆ ಮನೆಯಲ್ಲಿ ಕುಳಿತಂತೆ ಕಾಣಿಸುತ್ತೆ. ಇಂದು ಈ ಪ್ರವಾಸಿ ತಾಣ ಖಾಲಿ ಖಾಲಿ ಆಗಿರುವುದನ್ನು ನೋಡಿದ್ರೆ ಬಸವಣ್ಣನಿಗೂ ಸೂರ್ಯಗ್ರಹಣ ಹಿಡದಿದೇಯಾ ಎಂದು ಎನಿಸುತ್ತೆ.