ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿರುವ ಬಗ್ಗೆ ಬಿಜೆಪಿ ನಾಯಕ ಎ.ಮಂಜು ಪ್ರತಿಕ್ರಿಯಿಸಿ, ಅಪ್ಪ ಮಕ್ಕಳ ಜೊತೆ ಯಾರು ಇರೋಕೂ ಆಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರವಿರಬಹುದು, ಇನ್ನೊಂದು ಇರಬಹುದು ಕೇವಲ ಅವರ ಕುಟುಂಬಕ್ಕೆ ಸೀಮಿತ ಮಾಡಿಕೊಳ್ಳುತ್ತಾರೆ. ಅರ್ಹತೆ ಇರುವ ಯಾರಿಗೂ ಅಧಿಕಾರ ನೀಡುವುದಿಲ್ಲ. ಅಧಿಕಾರವಿಲ್ಲದೇ ಅಧ್ಯಕ್ಷನಾಗಿಯೂ ಜವಾಬ್ದಾರಿ ನಿರ್ವಹಿಸಲು ಆಗದ ಹಿನ್ನೆಲೆಯಲ್ಲಿ ನೊಂದು ವಿಶ್ವನಾಥ್ ಅವರು ರಾಜೀನಾಮೆ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತವಾರಣವಿದೆ. ಹೀಗಾಗಿ ಅಪ್ಪ ಮಕ್ಕಳ ಜೊತೆ ಯಾರು ಇರಲು ಆಗುವುದಿಲ್ಲ ಎಂದು ಮಂಜು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಜೀ ಹೂಜೂರ್ಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಕೆಲಸ ಮಾಡುವವರಿಗೆ ಹಿರಿಯರಿಗೆ ಗೌರವ ಸಿಗುತ್ತಿಲ್ಲ. ನಿಜವಾಗಿ ಪಕ್ಷ ಕಟ್ಟುವವರಿಗೆ ಪಕ್ಷ ಬೆಳೆಸುವಂತವರಿಗೆ ಸ್ಥಾನಮಾನ ನೀಡುವುದಿಲ್ಲ ಎಂದು ಕಿಡಿಕಾರಿದರು.
ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ಮೈತ್ರಿ ಸರ್ಕಾರವನ್ನ ನಾವು ಕೆಡವುದಕ್ಕೆ ಹೋಗುವುದಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಕುಮಾರಸ್ವಾಮಿಯವರೇ ನೈತಿಕವಾಗಿ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು. ನಾವು ಯಾರು ಸರ್ಕಾರವನ್ನ ಬೀಳಿಸುವುದಿಲ್ಲ. ಅವರೇ ಕೆಡವಿಕೊಳ್ಳುತ್ತಾರೆ ಎಂದು ಹೇಳಿದರು.