ಬೆಳಗಾವಿ : ಕಾಂಗ್ರೆಸ್ನಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ತಾವು ಯಾವುದೇ ಹುದ್ದೆಯಲ್ಲಿದ್ದರು, ಪಕ್ಷದಿಂದ ಪಡೆದಿರುವ ಸೌಲಭ್ಯಗಳನ್ನು ಮರೆಯಬಾರದು. ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಬಿಟ್ಟು ಪಕ್ಷಕ್ಕಾಗಿ ಒಗ್ಗೂಡಿ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜಾರಕಿಹೊಳಿ ಸಹೋದರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆದ ಜಿಲ್ಲಾ ಗ್ರಾಮೀಣ ಮತ್ತು ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಅವರು ಕಾಂಗ್ರೆಸ್ ಪಕ್ಷ ದೊಡ್ಡ ಕುಟುಂಬದಂತೆ ಪ್ರತಿ ಕುಟುಂಬದಲ್ಲೂ ಸಣ್ಣ ಸಣ್ಣ ಸಮಸ್ಯೆ, ಭಿನ್ನಭಿಪ್ರಾಯಗಳು ವ್ಯಕ್ತವಾಗುತ್ತವೆ ಅದನ್ನು ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ವೇಣುಗೋಪಲ್, ಅಚ್ಚೇದಿನ್ ಎಲ್ಲಿ ಬಂದಿದೆ. ಯುವಕರಿಗೆ ಉದ್ಯೋಗವಕಾಶಗಳು ಇಲ್ಲ. ಜಿಎಸ್ಟಿಯನ್ನು ಅಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಅಲ್ಲದೇ ನೋಟು ನಿಷೇಧದಿಂದ ಆರ್ಥಿಕ ಕ್ಷೇತ್ರದ ಪ್ರಗತಿ ಕುಸಿತಗೊಂಡಿದೆ. ಅಲ್ಲದೆ ಬಿಜೆಪಿ ಪಕ್ಷವು ಒಂದು ಧರ್ಮಕ್ಕೆ ಸೀಮಿತವಾಗಿದೆ ಎಂದು ಹೇಳಿದರು.
ಪಕ್ಷದ ಉಸ್ತುವಾರಿ ಎದುರೇ ಖುರ್ಚಿಗಾಗಿ ಗಲಾಟೆ : ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ್ ನವಲಗಟ್ಟಿಯ ಜೊತೆಗೆ ಶಾಸಕ ಅಶೋಕ ಪಟ್ಟಣ ಖುರ್ಚಿಗಾಗಿ ವಾಗ್ವಾದ ನಡೆಸಿದ ಘಟನೆ ನಡೆಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ತಮಗೆ ಜಿಲ್ಲಾ ಕಾಂಗ್ರೆಸ್ ನಿಂದ ಯಾವುದೇ ಕಾರ್ಯಕ್ರಮಗಳ ಮಾಹಿತಿ ಸಿಗೋದಿಲ್ಲ ಎಂದು ವೇಣುಗೋಪಾಲ್ ಮುಂದೆ ಅಳಲು ತೋಡಿಕೊಂಡರು.
ಇನ್ನೂ ಧರ್ಮನಾಥ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾರೆ, ಇತ್ತ ಬಿಜೆಪಿ ಕಾರ್ಯಕರ್ತರು ಭವನದ ಹೊರಗಡೆ ಧರಣಿ ನಡೆಸುತ್ತಿದ್ದರು. ವೇಣುಗೋಪಾಲ್ ಕಾರ್ಯಕ್ರಮದ ಆಗಮಿಸುವ ವೇಳೆ ಕಪ್ಪು ಬಾವುಟ ತೋರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಇದರ ನಡುವೆ ಮಧ್ಯ ಪ್ರವೇಶಿಸಿದ ಮಾಳಮಾರುತಿ ಪೊಲೀಸರು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದರು.