ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಗುರುವಾರ ಕರೆ ನೀಡಿದ್ದ 13 ಜಿಲ್ಲೆಗಳ ಬಂದ್ಗೆ ಒಮ್ಮತ ಮೂಡದ ಕಾರಣ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಬಂದ್ ಆಚರಣೆ ವಿಷಯದಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳ ಮಧ್ಯೆಯೇ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಮುಖಂಡರ ಜೊತೆಗೆ ಮಹದಾಯಿ ಹೋರಾಟಗಾರರೂ ಕೂಡ ಬಂದ್ನಿಂದ ದೂರ ಸರಿದಿದ್ದಾರೆ. ಮುಖ್ಯಮಂತ್ರಿಗಳು ನಿನ್ನೆ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕೂಡ ಬಂದ್ ಹಿಂಪಡೆಯಲು ಬಯಸಿದೆ.
ಇದರ ನಡುವೆ ಉತ್ತರ ಕರ್ನಾಟಕ ರೈತ ಸಂಘ ಮಾತ್ರ ನಾಳೆ ಬಂದ್ ಆಚರಿಸುವುದಾಗಿ ಘೋಷಿಸಿತ್ತು. ಆದರೆ, ಸಂಜೆ ವೇಳೆಗೆ ಬಹುತೇಕ ಸಂಘಟನೆಗಳು ಬಂದ್ ವಾಪಸ್ ಪಡೆದಿರುವುದಾಗಿ ಘೋಷಿಸಿದವು. ಬಂದ್ ಬದಲಾಗಿ ನಾಳೆ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿವೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಸಹ ನಾಳೆ ಯಾವುದೇ ಕಾರಣಕ್ಕೂ ಬಂದ್ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಒಮ್ಮತ ಮೂಡದಿರಲು ಕಾರಣವೇನು?
ನಾಳಿನ ಬಂದ್ ಆಚರಣೆ ವಿಚಾರದಲ್ಲಿ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರಲ್ಲೇ ಭಿನ್ನಮತಕ್ಕೆ ಉಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ನೋಡುವುದಾದರೆ ಹೈದರಬಾದ್ ಕರ್ನಾಟಕದ ಸವಲತ್ತನ್ನು ಮುಂಬೈ ಕರ್ನಾಟಕ ಪಡೆದ ಆರೋಪವಿದೆ. ಈ ಹಿಂದೆ ಹೈ-ಕ ಹೋರಾಟಕ್ಕೆ ಮುಂಬೈ ಕರ್ನಾಟಕ ಸ್ಪಂದಿಸಿರಲಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದೆ. ಹೈದ್ರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ವಿರೋಧಿಸಿ ಮುಂಬೈ ಕರ್ನಾಟಕ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ವೇಳೆಯೂ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರ ನಡುವೆ ಘರ್ಷಣೆ ನಡೆದಿತ್ತು.
ಪರ-ವಿರೋಧ ಪ್ರತಿಭಟನೆ: ಬಂದ್ ವಿಚಾರದಲ್ಲಿ ಅಪಸ್ವರ ವ್ಯಕ್ತವಾಗಿದ್ದರ ಬೆನ್ನಲ್ಲೇ ರಾಜ್ಯ ಹಲವೆಡೆ ಪರ-ವಿರೋಧ ಪ್ರತಿಭಟನೆಗಳೂ ನಡೆದಿವು. ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿಸಿದವು. ಮತ್ತೊಂದೆಡೆ ಪ್ರತ್ಯೇಕ ರಾಜ್ಯ ಒತ್ತಾಯವನ್ನು ವಿರೋಧಿಸಿ ದಾವಣಗೆರೆ ಹಾಗೂ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.