ಉಡುಪಿ: ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಂಶಯಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಶ್ರೀಗಳ ಮರಣೋತ್ತರ ಪರೀಕ್ಷೆ ಮತ್ತು ಎಫ್ಎಸ್ಎಲ್ ವರದಿ ಪೊಲೀಸರ ಕೈಸೇರಿಲ್ಲ. ಹಾಗಾಗಿ ಪ್ರಕರಣದ ಎಫ್ಐಆರ್ ಕೂಡ ಪೊಲೀಸರು ದಾಖಲಿಸಿಕೊಂಡಿಲ್ಲ.
ಜುಲೈ 19ಕ್ಕೆ ಸಾವನ್ನಪ್ಪಿರುವ ಸ್ವಾಮೀಜಿಯ ಸಾವಿನ ಕಾರಣ ನಿಗೂಢವಾಗಿಯೇ ಇದೆ. ಪೂರ್ವಾಶ್ರಮದ ತಮ್ಮ ಲಾತವ್ಯ ಆಚಾರ್ಯ ಇದೊಂದು ಅಸಹಜ ಸಾವು ಎಂದು ಮಾತ್ರ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಬರಲು ಒಂದು ವಾರ ಬೇಕಾಗುತ್ತದೆ. ಎಫ್ ಎಸ್ ಎಲ್ಗೆ 2 ವಾರಗಳು ಸಾಕು ಆದರೆ ದಿನ 30 ಕಳೆದರೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಜಯರಾಮ್ ಅಂಬೇಕಲ್ಲು ಹೇಳಿದರು.
ಎಫ್ ಎಸ್ ಎಲ್ ವರದಿ ಕೈಸೇರಲು ಕನಿಷ್ಟ ಎರಡು ವಾರ ಗರಿಷ್ಟ 8 ವಾರಗಳು ಬೇಕು. ಎಫ್ ಎಸ್ ಎಲ್ ವರದಿ ತಡವಾದಷ್ಟು ಸಾವಿಗೆ ಕಾರಣ ತಿಳಿಯಲು ಸಾಧ್ಯವಿಲ್ಲ ಎಂಬುದು ಶೀರೂರು ಶ್ರೀ ಕಾನೂನು ಸಲಹೆಗಾರ ರವಿಕಿರಣ್ ಮುರ್ಡೇಶ್ವರ ಅವರ ಸಂಶಯವಾಗಿದೆ. ದೇಹದಲ್ಲಿರುವ ಸಿಕ್ಕ ವಿಷದ ಅಂಶ ಪ್ರಯೋಗಾಲಯದಲ್ಲಿ ಪತ್ತೆಯಾಗಲು ಸಾಧ್ಯವಿಲ್ಲ ವಿಷ ವಿಷತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ಎಫ್ ಎಸ್ ಎಲ್ ವರದಿ ಬರುವ ತನಕ ಪೊಲೀಸ್ ತನಿಖೆ ನಡೆಸಲೂ ಆಗುತ್ತಿಲ್ಲ ಹಾಗಾಗಿ ಶೀರೂರು ಶ್ರೀ ಅಭಿಮಾನಿ ಸಮಿತಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದೆ. ಒಟ್ಟಿನಲ್ಲಿ ಶೀರೂರು ಶ್ರೀ ಪ್ರಕರಣ ಸಾಕಷ್ಟು ಕುತೂಹಲ ನಿರೀಕ್ಷೆಯ ಜೊತೆ ಸಂಶಯಗಳನ್ನು ಹುಟ್ಟುಹಾಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv