ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಮಗ ನಿಖಿಲ್ ಯಾವ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ. ನಾನು ಹೇಳುತ್ತೇನೆ ಯಾವುದೇ ಕಾರಣಕ್ಕೂ ಚುನಾವಣೆ ನಡೆಯುವುದಿಲ್ಲ. ಅಧಿಕಾರ ನಡೆಸಲು ಆದರೆ ನಡೆಸಲಿ, ಆಗದಿದ್ದರೆ ಬಿಟ್ಟು ಹೋಗಲಿ. ಈ ಸರ್ಕಾರ ಬಹಳ ದಿನ ಇರುತ್ತದೆ ಎಂದು ಯಾರಿಗೂ ವಿಶ್ವಾಸವಿಲ್ಲ. ಜನರ ಬಳಿ ಹೋಗಲು ಇನ್ನೂ ಐದು ವರ್ಷ ಬಾಕಿಯಿದೆ ಎಂದು ಹೇಳಿದರು.
ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ಕೊಡುವುದು ಪ್ರಧಾನಿಗಳಿಗೆ ಬಿಟ್ಟ ವಿಚಾರ ಎಂದ ಅವರು, ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದರು. ನಾವು ಸುಮಲತಾ ಅವರನ್ನು ಅಪ್ರೋಚ್ ಮಾಡಿಲ್ಲ. ಅದು ಅವರಿಗೆ ಬಿಟ್ಟ ವಿಷಯ ಎಂದರು.
ಇಂದಿನಿಂದ ಮೂರು ದಿನ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದೇನೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ಅರ್ಥವಿಲ್ಲ. ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನ ಕೊಟ್ಟಿಲ್ಲ. ಅದನ್ನು ಬಿಟ್ಟು ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ದೊಂಬರಾಟವಿದು. ರಾಜ್ಯದ ಜನ ಇದಕ್ಕೆಲ್ಲ ಬೆಲೆ ಕೊಡಲ್ಲ. ಜನರನ್ನು ವಂಚಿಸಿ ಪರಸ್ಪರ ಕಚ್ಚಾಟ, ಬಡಿದಾಟದಲ್ಲಿ ತೊಡಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಚ್.ಕೆ.ಪಾಟೀಲ್ Vs ಕೆ.ಜೆ.ಜಾರ್ಜ್: ಕೈ ನಾಯಕರ ನಡುವೆ ಜಿಂದಾಲ್ ಜಟಾಪಟಿ
ಇದೇ ವೇಳೆ ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಮೀನಿನ ಬಗ್ಗೆ ಮಾತನಾಡಿದ ಅವರು, ಜಿಂದಾಲ್ಗೆ ಕೊಡುತ್ತಿರುವ ಜಮೀನಲ್ಲಿ ಉತ್ತಮ ಖನಿಜಗಳಿವೆ. ಈಗಾಗಲೇ ಜಿಂದಾಲ್ಗೆ ಬಹಳ ಭೂಮಿ ಕೊಟ್ಟಾಗಿದೆ ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಬೇರೆ ಇಂಡಸ್ಟ್ರೀಸ್ಗೆ ಪ್ರೋತ್ಸಾಹ ಮಾಡಬಹುದು. ಯಾವುದೋ ಒಂದು ಕಂಪನಿಗೆ ಅನುಕೂಲ ಮಾಡಿ ವ್ಯವಹಾರ ಕುದುರಿಸಿಕೊಳ್ಳಲು ಕುಮಾರಸ್ವಾಮಿ ಹೊರಟಿದ್ದಾರೆ. ಕುಮಾರಸ್ಚಾಮಿ ನಿರ್ಧಾರ ಖಂಡಿಸಿ ಮೂರು ದಿನ ಧರಣಿ ಮಾಡುತ್ತೇವೆ ಅಂದರು. ಇದನ್ನೂ ಓದಿ: ಜಿಂದಾಲ್ ಕಾರ್ಖಾನೆಯಿಂದ ಮಹಾ ಮೋಸ- ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 5 ಕೋಟಿ ವಂಚನೆ