-ನಾನೂ ಉತ್ತರ ಕರ್ನಾಟಕದವನೇ
ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ, ನಾನೂ ಕೂಡ ಉತ್ತರ ಕರ್ನಾಟಕದವನೇ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ್ದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ವಿರೋಧ ಪಕ್ಷದವರು ಆ ರೀತಿ ಮಾತನಾಡುತ್ತಿರುವುದು ತಪ್ಪಲ್ಲ. ಸಮ್ಮಿಶ್ರ ಸರ್ಕಾರಕ್ಕೆ ನಾಡಿನ ಜನ ಬೆಂಬಲ ಕೊಡುತ್ತಾರೆ. ಯಾವುದೇ ಚುನಾವಣೆಯಾಗಲಿ, ಮತದಾರರೇ ದೇವರು. ಅವರ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗೋದು ಧರ್ಮ. ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ, ನಾನೂ ಕೂಡ ಉತ್ತರ ಕರ್ನಾಟಕದವನೇ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದರು.
ಸುದ್ದಿಗಾರರು ಕೊಡಗು ಸಂತ್ರಸ್ತರಿಗೆ ಸಚಿವ ರೇವಣ್ಣ ಬಿಸ್ಕತ್ ಎಸೆದ ವಿಚಾರ ಪ್ರಸ್ತಾಪಿಸಿದಾಗ, ಅವರು ಮಾಡಿದ ರೀತಿ ಸರಿಯಲ್ಲ, ಆದರೆ ಅವರು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಪರಿಹಾರ ಕೇಂದ್ರದಲ್ಲಿ ಸಾಕಷ್ಟು ಸಂತ್ರಸ್ತರಿದ್ದರಿಂದ ಗೊಂದಲವುಂಟಾಗಿದೆ. ಎಲ್ಲರಿಗೂ ಬಿಸ್ಕೆಟ್ ನೀಡುವ ಅವಸರದಲ್ಲಿ ರೇವಣ್ಣ ಹಾಗೆ ಮಾಡಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಈ ವೇಳೆ ಕೃಷ್ಣಾ ಮೇಲ್ದಂಡೆ ಕಾಮಾಗಾರಿ ವಿಳಂಬದ ಬಗ್ಗೆ ಪರಿಸೀಲನೆ ನಡೆದಿದೆ, ಈ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್ ಜೊತೆ ಮಾತನಾಡೋದಾಗಿ ಹೇಳಿ, ಕಾಂಗ್ರೆಸ್ಸಿನ 9 ಶಾಸಕರುಗಳು ಬಿಜೆಪಿಗೆ ಬರುತ್ತಾರೆಂಬ ಬಿ.ವೈ. ರಾಘವೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಘವೇಂದ್ರರವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತಮ್ಮ 82 ಶಾಸಕರು ಎಲ್ಲಿದ್ದಾರೆಂದು ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv