ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬಗ್ಗೆ ಹೊಟ್ಟೆ ಕಿಚ್ಚಿದ್ದವರಿಗೆ ಮದ್ದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (Pramod Madhwaraj) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ನ ಶಕ್ತಿಯನ್ನು ಸಹಿಸದೆ ಟೀಕೆ ಮಾಡುವವರಿದ್ದಾರೆ. ಆರ್ಎಸ್ಎಸ್ ಬಗ್ಗೆ ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಾರೆ. ಹೊಟ್ಟೆಕಿಚ್ಚಿನಿಂದ ಮಾತನಾಡುವವರಿಗೆ ಮದ್ದಿಲ್ಲ. ಅಜ್ಞಾನದಿಂದ ಮಾತನಾಡುವವರು ಆರ್ ಎಸ್ಎಸ್ ನ ಜ್ಞಾನ ಪಡೆದುಕೊಳ್ಳಬಹುದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ (Siddaramaiah), ಎಡಪಂಥೀಯ ಚಿಂತಕರಿಗೆ ಟಾಂಗ್ ಕೊಟ್ಟರು.
ಆರ್ಎಸ್ಎಸ್ ದೇಶಭಕ್ತಿ ದೇಶಪ್ರೇಮ ದೇಶ ನಿಷ್ಠೆಯ ಸಂಘಟನೆ. ದೇಶದ ಕಟ್ಟಕಡೆಯ ಬಡವನ ಬಗ್ಗೆ ಸೇವಾ ರೂಪದಲ್ಲಿ ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಕಳೆದ ಐದು ತಿಂಗಳಲ್ಲಿ ನಾನು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭ. ದೇಶ ಕಟ್ಟುವ ಕೆಲಸ ಸಂಸ್ಕಾರ ಉದ್ದೀಪಿಸುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ
ಕಟ್ಟ ಕಡೆಯ ವ್ಯಕ್ತಿಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಆರ್ಎಸ್ಎಸ್ ಸೇವೆ ಸಲ್ಲಿಸುತ್ತಿದೆ. ಸಂಘವನ್ನು ತಿಳಿದುಕೊಳ್ಳದೆ ವಿರೋಧ ಮಾತನಾಡಬಾರದು. ನಾನು ಕೂಡ ಹಿಂದೆ ಆರ್ಎಸ್ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆ. ಆರ್ಎಸ್ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ. ಅಜ್ಞಾನದಿಂದ ಸಂಘದ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸೇರಿದ ನಂತರ ಪ್ರಮೋದ್ ಮಧ್ವರಾಜ್, ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಆರ್ಎಸ್ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಭಾಗಿಯಾಗಿದ್ದರು.