ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದೇಶ ಹೊರಡಿಸುತ್ತಿದ್ದಂತೆಯೇ ರಾಜ್ಯದ ಜನ ಮುಂಜಾಗ್ರತಾ ಕ್ರಮವಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಆದರೆ ಕುಡುಕರಿಗೆ ಮಾತ್ರ ಈ ಕೊರೊನಾದ ಭಯವೇ ಇಲ್ಲದಂತಾಗಿದೆ.
ಹೌದು. ಬಾರ್ ಗಳಲ್ಲಿ ಕುಡುಕರು ಎಣ್ಣೆ ಕುಡಿದುಕೊಂಡು ಕುಳಿತಿದ್ದಾರೆ. ಈ ಮೂಲಕ ಅವರಲ್ಲಿ ಕೊರೊನಾ ಭಯ ಕಾಣುತ್ತಿಲ್ಲ. ಸರ್ವ ರೋಗಕ್ಕೂ ಸಾರಾಯಿ ಮದ್ದು ಅನ್ನೋ ಹಾಗೆ ಕುಡುಕರು ಮಾತ್ರ ಬಾರ್ ಗಳಲ್ಲಿ ಠಿಕಾಣಿ ಹೂಡುತ್ತಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ನಗರದ ಕುಂದಹಳ್ಳಿಯ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಗೂಂಡಾಗಿರಿ ನಡೆಸಿದ್ದಾರೆ. ಕುಂದಲಹಳ್ಳಿ ಸೆಂದಿಲ್, ಅನಿಲ್, ರಾಜ, ಗುಂಡು ಮಣಿ ಕುಡಿದು 1800 ರೂಪಾಯಿ ಬಿಲ್ ಮಾಡಿದ್ದರು. ಆದರೆ ಈ ಬಿಲ್ ಕೇಳಿದ್ದಕ್ಕೆ ಬಿಯರ್ ಬಾಟಲ್ ಒಡೆದು ಹಾಕಿದ್ದಾರೆ. ಅಲ್ಲದೆ ಕ್ಯಾಶಿಯರ್ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಹೆಚ್ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಕಲಬುರಗಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಮೊದಲ ಬಲಿ ಪಡೆದ ಹಿನ್ನೆಲೆಯಲ್ಲಿ ರಾಜ್ಯವೇ ತಲ್ಲಣಗೊಂಡಿದೆ. ಈ ಮಾರಣಾಂತಿಕ ವೈರಸ್ ನಿಂದ ರಾಜ್ಯವನ್ನ ಉಳಿಸಲು ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಒಂದು ವಾರಗಳ ಕಾಲ ಮಾಲ್, ಸಿನಿಮಾ ಮಂದಿರ, ಜಿಮ್, ಸ್ಪೋಟ್ರ್ಸ್ ಕ್ಲಬ್, ಪಬ್, ನೈಟ್ ಕ್ಲಬ್ ಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ.
ಸಾರ್ವಜನಿಕರು ಹೆಚ್ಚಾಗಿ ಸೇರೋ ಜಾತ್ರೆ, ಮದುವೆ, ಸೆಮಿನಾರ್ ಸೇರಿದಂತೆ ಅನೇಕ ಸಮಾರಂಭಗಳನ್ನ ಒಂದು ವಾರಗಳ ಕಾಲ ಮುಂದೂಡುವಂತೆ ತಿಳಿಸಿದೆ. ಹೀಗಾಗಿ ಜನರಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಮೆಟ್ರೋ ಟ್ರೈನ್ ಸೇರಿದಂತೆ ಜನರಿಲ್ಲದೆ ಖಾಲಿ ಖಾಲಿಯಾಗಿ ಕೊರೊನಾ ವೈರಸ್ ಜನರಲ್ಲಿ ಭಯ ಭೀತಿ ಉಂಟುಮಾಡಿದೆ.