ಬೆಂಗಳೂರು: ನಾನು ಸೋನಿಯಗಾಂಧಿಯವರ ಬಳಿ ಯಾರ ವಿರುದ್ಧವೂ ದೂರು ನೀಡಿಲ್ಲ. ನನ್ನ ಬಗ್ಗೆ ಸೋನಿಯಗಾಂಧಿಯವರಿಗೆ ಗೊತ್ತು. ಆದರೆ ಪಕ್ಷ ಸಂಘಟನೆಗೆ ಏನೇನು ಆಗಬೇಕು ಎನ್ನುವುದರ ಬಗ್ಗೆ ಎಲ್ಲಾ ವಿಷಯವನ್ನು ಸೋನಿಯ ಗಾಂಧಿಯವರಿಗೆ ತಿಳಿಸಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿ ಮಾತುಕತೆಗೆ ಸಮಯ ನೀಡಿಲ್ಲ ಎನ್ನುವುದು ತಪ್ಪು. ಪಕ್ಷದ ಅಧ್ಯಕ್ಷರು ಕೇಳಿದಾಗ ತಕ್ಷಣವೇ ಸಮಯ ಸಿಗುತ್ತದೆ. ನಾನು ಅಧ್ಯಕ್ಷನಾಗಿದ್ದಾಗ ಅವರನ್ನು ಭೇಟಿ ಮಾಡಿದ್ದೇನೆ. ಅಧ್ಯಕ್ಷನಾಗಿ ಇರದಿದ್ದಾಗ ಎಷ್ಟೋ ಬಾರಿ ನನಗೆ ಭೇಟಿಗೆ ಅವಕಾಶವೇ ಸಿಕ್ಕಿರಲಿಲ್ಲ. ಅದನ್ನು ತಪ್ಪಾಗಿ ಆರ್ಥೈಸುವುದು ಬೇಡ ಎಂದು ತಿಳಿಸಿದರು.
ಒಂದು ವರ್ಷದ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿಯಾದೆ. ಡಿಕೆಶಿ ವಿಚಾರದಲ್ಲಿ ಸೋನಿಯ ಗಾಂಧಿ ಸಹ ನೊಂದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ಏನಾದರು ಮಾಡಲಿ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನಗೆ ಶತೃತ್ವ ಇದೆ ಎಂದು ಬಿಂಬಿಸುವುದರಲ್ಲಿ ಯಾರದ್ದೋ ಕೈವಾಡ ಇದೆ. ನಾವಿಬ್ಬರು ಚೆನ್ನಾಗಿದ್ದರೆ ಕಾಂಗ್ರೆಸ್ ಪ್ರಬಲವಾಗುತ್ತದೆ. ಹೀಗಾಗಿ ಈ ರೀತಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ವೇದಿಕೆಯಲ್ಲಿ ಇಬ್ಬರದ್ದೂ ಒಂದೇ ಅಭಿಪ್ರಾಯ ಇರಬೇಕು ಎಂದೇನಿಲ್ಲ. ಅಭಿಪ್ರಾಯ ಭೇದ ಸಹಜ. ಆದರೆ ಮೂಲ ಹಾಗೂ ವಲಸಿಗ ಕಾಂಗ್ರೆಸ್ ಅನ್ನುವುದು ತಪ್ಪು. ಪಕ್ಷದ ತತ್ವ ಸಿದ್ಧಾಂತ ಒಪ್ಪಿದ ಮೇಲೆ ಮುಗಿಯಿತು. ಹಾಗೆ ವಲಸಿಗ ಅನ್ನೋದಾದ್ರೆ ಸಿದ್ದರಾಮಯ್ಯನವರಿಗೆ ವಿಪಕ್ಷ ಸ್ಥಾನ ಸಿಎಂ ಹುದ್ದೆ ಯಾವುದು ಸಿಗುತ್ತಿರಲಿಲ್ಲ. ಮೂಲ ವಲಸಿಗ ಎಂದೇನಿಲ್ಲ, ಎಲ್ಲರೂ ಕಾಂಗ್ರೆಸ್ಸಿಗರೇ ಎಂದು ತಿಳಿಸಿದರು.
ನಾವು ರಾಜ್ಯದ ನಾಯಕರೆಲ್ಲ ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿಎಲ್ಪಿ ಸಭೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನಾನು ದೆಹಲಿಗೆ ಹೋದ ಮೇಲೆ ದಿನೇಶ್ ಗುಂಡೂರಾವ್ ಕರೆ ಮಾಡಿ ನಾಳೆ ಸಿಎಲ್ಪಿ ಇದೆ ಬನ್ನಿ ಎಂದರು. ನಾನು ದೆಹಲಿಯಲ್ಲಿ ಇದ್ದೇನೆ ಬರೋಕೆ ಆಗಲ್ಲ ಎಂದು ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಗೆಳೆಯ ಡಿಕೆಶಿಯವರನ್ನು ದೆಹಲಿಯ ಆಸ್ಪತ್ರೆಯಲ್ಲಿ ಭೇಟಿ ಮಾಡಿದೆ. ಇಡಿ ವಿಚಾರಣೆ ನ್ಯಾಯಯುತವಾಗಿ ನಡೆಯಬೇಕು. ನಾನು ಕಳ್ಳತನ, ತಪ್ಪು ಮಾಡಿಲ್ಲ ಅಕೌಂಟಿಂಗ್ನಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿಕೊಂಡು ಆದಷ್ಟು ಬೇಗ ಸಂಕಷ್ಟದಿಂದ ಹೊರ ಬರುತ್ತೇನೆ ಎಂದು ತಿಳಸಿದ್ದಾರೆ ಎಂದು ಮಾಹಿತಿ ನೀಡಿದರು.