ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿ ಸದ್ಯ 3 ಸಚಿವ ಸ್ಥಾನಗಳು ಖಾಲಿ ಇದ್ದು, ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಮಾತ್ರ ಭರ್ತಿ ಮಾಡುತ್ತೇವೆ. ಸಚಿವ ಸಂಪುಟದ ಪುನರ್ ರಚನೆಯೂ ಇಲ್ಲ, ವಿಸ್ತರಣೆಯೂ ಇಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೇವಲ ಶಿವಳ್ಳಿಯಿಂದ ತೆರವಾದ ಸ್ಥಾನ ಮಾತ್ರ ಭರ್ತಿ ಮಾಡುತ್ತೇವೆ ಯಾವುದೇ ರೀತಿ ಸಂಪುಟ ಪುನರ್ ರಚನೆ ಇಲ್ಲ. ಕಾಂಗ್ರೆಸ್ ನಲ್ಲಿ 1, ಜೆಡಿಎಸ್ನಲ್ಲಿ 2ಸ್ಥಾನ ಭರ್ತಿಯಾಗಬೇಕಿದೆ. ಬಹುಬೇಗ ಆ ಸ್ಥಾನವನ್ನು ಭರ್ತಿ ಮಾಡುತ್ತೇವೆ. ಜೆಡಿಎಸ್ ಪಕ್ಷದವರು ಅವರ ಸ್ಥಾನವನ್ನು ಭರ್ತಿ ಮಾಡುತ್ತಾರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಹೊಸದಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಚಿವ ಸ್ಥಾನ ಬದಲಾಯಿಸುವ ಅಥವಾ ಸಂಪುಟದಿಂದ ಕೈ ಬಿಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ. ಜೂನ್ 1ಕ್ಕೆ ಸರ್ಕಾರ ಬೀಳುತ್ತೆ ಎಂಬ ಬಿಎಸ್ವೈ ಹೇಳಿಕೆ ಸುಳ್ಳು ಅಷ್ಟೇ. ಒಂದು ವರ್ಷದಿಂದ ಅವರು ಇದೇ ರೀತಿ ಹೇಳಿಕೆ ನೀಡುತ್ತಿದ್ದು, ಜೂನ್ 1ರಂದು ಸರ್ಕಾರ ಬೀಳದೇ ಇದ್ದರೆ ರಾಜೀನಾಮೆ ಕೊಡುತ್ತಾರಾ ಎಂದು ಸವಾಲು ಎಸೆದರು.
ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು ರಾಜ್ಯದಲ್ಲಿನ ಸರ್ಕಾರ ಬೀಳಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದಲ್ಲ.
ಲೋಕಸಭಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದ ಮಾತ್ರಕ್ಕೆ ವಿಧಾನಸಭೆಯನ್ನೂ ವಿಸರ್ಜನೆ ಮಾಡಲಿ ಎಂದು ಹೇಳುವುದು ನಾನ್ ಸೆನ್ಸ್.@INCKarnataka #Mysore
— Siddaramaiah (@siddaramaiah) May 27, 2019
ಜೂನ್ 01 ರಂದು ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸರಣಿ ಟ್ವೀಟ್ ಮಾಡಿ ಟಾಂಗ್ ನೀಡಿರುವ ಸಿದ್ದರಾಮಯ್ಯ ಅವರು, ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು ರಾಜ್ಯದಲ್ಲಿನ ಸರ್ಕಾರ ಬೀಳಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದಲ್ಲ. ಲೋಕಸಭಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದ ಮಾತ್ರಕ್ಕೆ ವಿಧಾನಸಭೆಯನ್ನೂ ವಿಸರ್ಜನೆ ಮಾಡಲಿ ಎಂದು ಹೇಳುವುದು ನಾನ್ ಸೆನ್ಸ್ ಎಂದು ಟಾಂಗ್ ನೀಡಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೈ ಸೋಲಿನ ವಿಚಾರ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದು, ಯಾವ ಕಾರಣಕ್ಕೆ ಕಾಂಗ್ರೆಸ್ ಸೋತಿದೆ ಎಂಬುದು ಗೊತ್ತಿಲ್ಲ. ಫಲಿತಾಂಶದ ಬಗ್ಗೆ ಕಾರ್ಯಕರ್ತರ ಜೊತೆ ಪರಾಮರ್ಶೆ ಮಾಡುತ್ತೇನೆ ಎಂದರು.