ನವದೆಹಲಿ: ಇನ್ಮುಂದೆ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯ ಸಭೆಗಳಲ್ಲಿ ಬಿಸ್ಕೆಟ್ಗೆ ಎಂಟ್ರಿ ಇಲ್ಲ. ಅದರ ಬದಲಿಗೆ ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಸೂಚನೆ ನೀಡಿದ್ದಾರೆ.
ಹೌದು. ಸಾಮನ್ಯವಾಗಿ ಎಲ್ಲಾ ಸಭೆಗಳಲ್ಲಿ ಸ್ಯಾಕ್ಸ್ ಗೆ ಟೀ ಜೊತೆ ಬಿಸ್ಕೆಟ್ ನೀಡುತ್ತಾರೆ. ಆದರೆ ಆರೋಗ್ಯಯುತ ಆಹಾರದ ಬಗ್ಗೆ ಕಾಳಜಿವಹಿಸಿರುವ ಹರ್ಷ ವರ್ಧನ್ ಅವರು ಇಲಾಖೆಯ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ.
ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಬಿಸ್ಕೆಟ್ ನೀಡುವಂತಿಲ್ಲ, ಅದರ ಬದಲಿಗೆ ಡ್ರೈ ಫ್ರೂಟ್ಸ್ಗಳಾದ ಬಾದಾಮಿ, ವಾಲ್ನೆಟ್ ಸೇರಿದಂತೆ ಹುರಿದ ಕಾಳುಗಳನ್ನು ಸ್ನ್ಯಾಕ್ಸ್ ಗೆ ನೀಡಿ ಎಂದು ತಿಳಿಸಿದ್ದಾರೆ.
ಜೂನ್ 19ರಂದು ಈ ಬಗ್ಗೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಅನಾರೋಗ್ಯಯುತ ಆಹಾರಗಳನ್ನು ಇಲಾಖೆಯ ಸಭೆಗಳಲ್ಲಿ ನೀಡುವಂತಿಲ್ಲ ಎಂದು ಹೇಳಿದೆ.
ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ, ಇದು ಒಳ್ಳೆಯ ನಿರ್ಧಾರ. ನಮ್ಮ ಬಗ್ಗೆ ಸಚಿವರು ಕಾಳಜಿ ವಹಿಸುತ್ತಿರುವುದು ನಮಗೆ ಸಂತೋಷವಾಗಿದೆ. ಸಚಿವರು ವೈದ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಅನಾರೋಗ್ಯವಾದ ಪದಾರ್ಥಗಳು ಯಾವ ರೀತಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿದೆ. ಆದ್ದರಿಂದ ಈ ರೀತಿ ನಿರ್ಣಯ ಕೈಗೊಂಡಿದ್ದಾರೆ. ನಾವು ಈ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.