ಚಿಕ್ಕಮಗಳೂರು: ಯಾರ್ರೀ ಐಜಿ. ಐಜಿ ದೊಡ್ಡವನು ಎಂದು ನಾನು ಒಪ್ಪುವುದಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ವಿರುದ್ಧ ಆಕ್ರೋಶ ಹೊರಹಾಕಿದರು.
ಶಾಸಕ ಕುಮಾರಸ್ವಾಮಿ, ಪಿಎಸ್ಐಗೆ ಫೋನ್ ಮಾಡಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ಬಳಿಕ ಮಾಧ್ಯಮದ ಜೊತೆ ಅವರು ಮಾತನಾಡಿದರು. ಯಾರ್ರೀ ಐಜಿ? ಐಜಿ ಸೀಮೆಗಿಲ್ಲದವರಾ? ಐಜಿ ದೊಡ್ಡ ವ್ಯಕ್ತಿ ಎಂದು ನಾನು ಒಪ್ಪುವುದಿಲ್ಲ. ಐಜಿಗೆ ನನ್ನ ಕ್ಷೇತ್ರಕ್ಕೆ ಬಲವಂತ ಮಾಡುವಂತಹಾ ಹಠ ಏಕೆ ಎಂದು ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೈಲಿಗೆ ಹೋಗಿಬಂದವ್ರಿಂದ ನೀತಿ ಪಾಠ ಕೇಳುವ ದರ್ದು ಬಿಜೆಪಿಗಿಲ್ಲ: ಕಾರಜೋಳ
ಐಜಿ ದುಡ್ಡು ತಗೊಂಡು ಅವನನ್ನು ಮಲ್ಲಂದೂರು ಠಾಣೆಗೆ ಹಾಕಿರಬಹುದು. ಅದು ಅವನ ಬಾಯಲ್ಲೇ ಬಂದಿದೆ. ಐಜಿಗೆ 50 ಸಾವಿರ ರೂ. ನೀಡಬೇಕು ಎಂದು ಹಲವರ ಬಾಯಿಂದಲೇ ಬಂದಿದೆ. ಯಾವ್ಯಾವ ಪೊಲೀಸರು ಯಾವ್ಯಾವ ಬಾರಲ್ಲಿ ಎಷ್ಟು ಹಣ ವಸೂಲಿ ಮಾಡುತ್ತಾರೆ ಎಂದು ಗೊತ್ತು. ಪೊಲೀಸರ ಬಣ್ಣ ಬಯಲು ಮಾಡ್ತೀನಿ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.
ನಾನು ಆವಾಜ್ ಹಾಕಿರೋದು ನಿಜ. ಯಾವನಿಗೂ ಕ್ಷಮೆ ಕೇಳಲ್ಲ. ಜಾಗ ಖಾಲಿ ಮಾಡಬೇಕಷ್ಟೆ. ಆತ ನನ್ನ ಅನುಮತಿ ಇಲ್ಲದೆ ನನ್ನ ಕ್ಷೇತ್ರಕ್ಕೆ ಬಂದಿದ್ದಾನೆ. ಇದು ಚುನಾವಣೆ ವರ್ಷ. ರಾಜ್ಯದ ಎಲ್ಲ ಶಾಸಕರು ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುತ್ತಾರೆ. ನೀನು ಬೇಡ, ಬರಬೇಡ ಎಂದಿದ್ದೆ. ಐಜಿ ಹೇಳಿದ್ದಾರೆ ಎಂದು ರಾತ್ರಿ ಕದ್ದು ಚಾರ್ಜ್ ತಗೆದುಕೊಂಡಿದ್ದಾನೆ. ಏಕೆ ಬಂದಿದ್ದೀಯಾ ಹೋಗು ಎಂದಿದ್ದಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು ಎಂದು ವಿವರಿಸಿದರು.
ನಾನು ಕ್ರಿಮಿನಲ್ ಅಲ್ಲ. ಅವನು ಕ್ರಿಮಿನಲ್ ಅಲ್ಲ. ನನ್ನ ಮೊಬೈಲ್ ಟ್ರ್ಯಾಪ್ ಮಾಡಿದ್ದಾನೆ. ಅವನೇ ಕ್ರಿಮಿನಲ್. ಈ ಕುರಿತು ಸದನ ಸಮಿತಿಯಲ್ಲಿ ಪ್ರಕರಣ ದಾಖಲಿಸುತ್ತೇನೆ ತನಿಖೆಯಾಗಲಿ. ಭ್ರಷ್ಟಾಚಾರ ಆಗುತ್ತೆ ಎಂದು ನಾನು ಯಾವುದೇ ಪೊಲೀಸರ ಬಳಿ ಅರ್ಧ ಟೀ ಕುಡಿಯುವುದಿಲ್ಲ. ಏಕವಚನ ಎಲ್ಲರೂ ಬಳಸುತ್ತಾರೆ ಎಂದರು. ಇದನ್ನೂ ಓದಿ: ಕೇಂದ್ರವು ಧ್ವನಿವರ್ಧಕಗಳ ಬಗ್ಗೆ ನೀತಿಯನ್ನು ತರಬೇಕು: ಮಹಾರಾಷ್ಟ್ರ ಗೃಹ ಸಚಿವ
ನೀವು ಶಾಸಕ… ಶಾಸಕ… ಅಂತೀರಾ. ಶಾಸಕರು ಎಂದು ಹೇಳಬೇಕು ಎಂದು ಮಾಧ್ಯಮದವರಿಗೂ ಬಹುವಚನದ ಪಾಠ ಮಾಡಿದ್ದಾರೆ. ನನ್ನಷ್ಟು ನಿಷ್ಟೆ-ಲಾಯಲ್ಟಿ ಯಾರಿಗೂ ಇಲ್ಲ ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ನನಗೆ ಬೇಕಾದವರನ್ನ ಹಾಕಿಸಿಕೊಳ್ಳುವುದು ಎಂದರೆ ಲಂಚ ತೆಗೆದುಕೊಳ್ಳುವುದಕ್ಕಲ್ಲ. ಲಂಚ ತೆಗೆದುಕೊಳ್ಳುವವರು ಯಾರು ಅಂತ ಗೊತ್ತು. ನಾನು ತೆಗೆದುಕೊಳ್ಳುವುದಿಲ್ಲ ಎಂದು ಆರೋಪಿ ಮಾಡಿದರು.