ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ(ಕೆವಿಐಸಿ) ಉತ್ತೇಜನ ನೀಡುವ ಸಲುವಾಗಿ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿದರಿನ ಬಾಟಲ್ ಹಾಗೂ ಸಗಣಿ ಸೋಪ್ನಂತಹ ಪರಿಸರ ಸ್ನೇಹಿ ಉತ್ಪನ್ನಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ್ದಾರೆ.
ಇಂದು ಮಹಾತ್ಮಾಗಾಂಧಿ 150ನೇ ಜಯಂತೋತ್ಸವವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಒಂದು ಬಾರಿ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದೆ. ಜೊತೆಗೆ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ಹೆಚ್ಚೆಚ್ಚು ಉದ್ಯೋಗ ನೀಡುವ ಭರವಸೆ ನೀಡಿದೆ.
ಈ ಬಗ್ಗೆ ಮಾತನಾಡಿದ ಸಚಿವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮವು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ನೊಂದಣಿಯಾಗಿ ಬಂಡವಾಳ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಬಗ್ಗೆ ನಾವು ಯೋಜನೆಯನ್ನು ರೂಪಿಸಿ ಅದನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದ್ದೇವೆ, ಈ ಮೂಲಕ ಶೇ.10 ರಷ್ಟು ಷೇರುಗಳನ್ನು ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಹೀಗಾಗಿ ಮುಂದಿನ ಎರಡು ವರ್ಷದಲ್ಲಿ ಕೆವಿಐಸಿ 10 ಸಾವಿರ ಕೋಟಿಗೂ ಅಧಿಕ ವಹಿವಾಟು ಸಾಧಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಬೇಕು. ಮಹಾತ್ಮ ಗಾಂಧೀಜಿ ಅವರ ಆರ್ಥಿಕ ಚಿಂತನೆಗೆ ಧಕ್ಕೆಯಾಗದಂತೆ ಉತ್ತಮ ಪ್ಯಾಕೆಜಿಂಗ್, ಗುಣಮಟ್ಟ, ಪಾರದರ್ಶಕ ವಿಧಾನ ನಮಗೆ ಬೇಕು ಎಂದರು.
ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಹೊಂದಿದೆ. ಈ ಕೇಂದ್ರಗಳಲ್ಲಿ ಗ್ರಾಹಕರು ಬಿದಿರಿನ ಬಾಟಲಿ, ಸಗಣಿ ಸೋಪ್ ಖರೀದಿ ಮಾಡಬಹುದಾಗಿದೆ. ಗೋಮೂತ್ರ ಹಾಗೂ ಸಗಣಿ ಬಳಸಿ ಸೋಪನ್ನು ತಯಾರಿಸಲಾಗಿದ್ದು, ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾದ ನಂತರವೇ ಸೋಪನ್ನು ಮಾರುಕಟ್ಟೆಗೆ ತರಲಾಗಿದೆ. ಇದು ಚರ್ಮಕ್ಕೆ ಬಹಳ ಒಳ್ಳೆಯದಾಗಿದ್ದು, ಮಾರುಕಟ್ಟೆಯಲ್ಲಿ ಒಂದು ಬಿದಿರಿನ ಬಾಟಲಿಗೆ 560 ರೂ. ಇದ್ದು, 125 ಗ್ರಾಂ ಸಗಣಿ ಸೋಪ್ ಬೆಲೆ 125 ರೂಪಾಯಿ ಇದೆ.
Delhi: Union Minister Nitin Gadkari launched a special sales campaign of Khadi and Village Industries Commission & launched cow dung soaps and bamboo bottles yesterday, on the eve of #GandhiJayanti pic.twitter.com/T8UUJRWYBI
— ANI (@ANI) October 2, 2019