ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.
2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್ಎಸ್ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.
2010ರಲ್ಲಿ ಅಂದಿನ ಸಿಐಡಿ ಡಿವೈಎಸ್ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.
ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.