ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ ತಂಡ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ಮನೆಯಲ್ಲಿ ಇಟ್ಟು ಭಜನೆ ಮಾಡಿದ್ದಾರೆ.
ಹೌದು. ನಾಲ್ಕನೇಯ ಬಾರಿ ಟ್ರೋಫಿ ಗೆದ್ದು ಆಟಗಾರರ ಜೊತೆ ರಾತ್ರಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
‘ಅಂಟಿಲಿಯಾ’ ನಿವಾಸದಲ್ಲಿರುವ ಪೂಜಾ ಕೊಠಡಿಗೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿ ಕೃಷ್ಣನ ಮುಂದೆ ಇರಿಸಿ ಭಜನೆ ಮಾಡಿದ್ದಾರೆ. “ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ” ಶ್ಲೋಕವನ್ನು ನೀತಾ ಅಂಬಾನಿ ಪಠಿಸಿದ್ದು ವಿಡಿಯೋ ಈಗ ವೈರಲ್ ಆಗಿದೆ.
ಮಿನಿ ದೇವಾಲಯದ ರೂಪದಲ್ಲಿ ಈ ಪೂಜಾ ಕೊಠಡಿಯನ್ನು ನಿರ್ಮಾಣ ಮಾಡಲಾಗಿದ್ದು, ಬಹಳ ಸಂಭ್ರಮದಿಂದ ನೀತಾ ಅಂಬಾನಿ ಕಪ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ತಂಡದ ಎಲ್ಲ ಸದಸ್ಯರಿಗೆ ನೀತಾ ಅಂಬಾನಿ ತಮ್ಮ ನಿವಾಸದಲ್ಲಿ ಪಾರ್ಟಿ ನೀಡಿ ಅಭಿನಂದಿಸಿದ್ದಾರೆ.
ಪ್ರತಿ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಬೆಂಬಲಿಸುವ ಟೀ ಶರ್ಟ್ ಧರಿಸಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀತಾ ಅಂಬಾನಿ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಕೊನೆಯ ಎಸೆತವನ್ನು ನಾನು ನೋಡಿಲ್ಲ. ಈ ವೇಳೆ ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ತಂಡವನ್ನು ಹೇಗೆ ಹುರಿದುಂಬಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದೆ ಎಂದು ಉತ್ತರ ನೀಡಿದ್ದರು.
What would you not give to know the powerful mantras #NitaAmbani is reciting ????
Remember, whatever it is, it works ???? pic.twitter.com/Tv5ToYskP7
— SrinagarGirl (@SrinagarGirl) May 13, 2019