-ನಾಲ್ವರಿಗೆ ಕೊನೆ ಕ್ಷಣದವರೆಗೂ ಬದುಕುವ ನಂಬಿಕೆಯಿತ್ತು
-ಪ್ರತಿಯೊಬ್ಬರ ಖಾತೆಯಲ್ಲಿ 8ರಿಂದ 10 ಸಾವಿರ
ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣ ನಿನ್ನೆ ಅಂತ್ಯಕಂಡಿದೆ. ನಿರ್ಭಯಾ ಪ್ರಕರಣದ ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೆ ಹಾಕುವ ಮೂಲಕ ನ್ಯಾಯವನ್ನು ಎತ್ತಿ ಹಿಡಿದಿತ್ತು. ನಾಲ್ವರಲ್ಲಿ ವಿನಯ್ ಮಾತ್ರ ತನ್ನ ಕೊನೆಯಾಸೆಯನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದನು ಎಂದು ವರದಿಯಾಗಿದೆ.
ಗಲ್ಲು ಶಿಕ್ಷೆ ನಿಗದಿಯಂತೆ ಜೈಲಿನ ನಿಯಮದಂತೆ ದೋಷಿಗಳಿಗೆ ಕೊನೆಯಾಸೆಯನ್ನು ಕೇಳಲಾಗಿತ್ತು. ಅಕ್ಷಯ್, ಮುಖೇಶ್ ಮತ್ತು ಪವನ್ ಈ ಬಗ್ಗೆ ಏನನ್ನು ಹೇಳಿರಲಿಲ್ಲ. ಆದ್ರೆ ಅಕ್ಷಯ್, ಒಂದು ವೇಳೆ ನನಗೆ ಇವತ್ತು ನೇಣು ಹಾಕಿದರೆ ನಾನು ಬಿಡಿಸಿದ ಪೇಟಿಂಗ್ ಗಳಲ್ಲಿ ಒಂದನ್ನು ಜೈಲಿನ ಸೂಪರಿಟೆಂಡೆಂಟ್ ಅವರಿಗೆ ನೀಡಬೇಕು. ಉಳಿದ ಎಲ್ಲ ಪೇಟಿಂಗ್ ಮತ್ತು ವಸ್ತುಗಳನ್ನು ತಾಯಿಗೆ ನೀಡಬೇಕು ಎಂದು ಹೇಳಿದ್ದನು.
ವಿನಯ್ ಸೇರಿದಂತೆ ನಾಲ್ವರಿಗೂ ಕೊನೆ ಕ್ಷಣದವರೆಗೂ ತಮ್ಮನ್ನು ಗಲ್ಲಿಗೆ ಹಾಕಲ್ಲ ಎಂಬ ನಿರೀಕ್ಷೆಯಲ್ಲಿದ್ದರು. ಗಲ್ಲು ಶಿಕ್ಷೆಗೆ ತಡೆ ಸಿಗಬಹುದು ಎಂಬ ನಂಬಿಕೆಯಲ್ಲಿದ್ದರು. ಹಾಗಾಗಿ ಅಕ್ಷಯ್, ಮುಖೇಶ್ ಮತ್ತು ಪವನ್ ತಮ್ಮ ಕೊನೆಯಾಸೆಯನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿರಲಿಲ್ಲ. ಶುಕ್ರವಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿಮ್ಮ ಅರ್ಜಿಯನ್ನು ವಜಾಗೊಳಿಸಿದೆ ಎಂದಾಗ ನಾಲ್ವರು ಶಾಕ್ ಆಗಿದ್ದರು.
ಒಂದು ಕಾಲು ಗಂಟೆಯಲ್ಲಿಯೇ ನಾಲ್ವರು ಸಾವನ್ನಪ್ಪುತ್ತಾರೆ ಎಂದು ಇವರ ಮುಖಗಳನ್ನ ನೋಡಿದರೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಗಲ್ಲು ಹಾಕುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ನಾಲ್ವರು ಇದೊಂದು ಪ್ರಯೋಗ ಎಂದು ಮಾತ್ರ ಅಂತ ತಿಳಿದಿದ್ದರು.
ಸಹ ಕೈದಿಗಳಿಂದ ಆಕ್ರೋಶ: ನಾಲ್ವರನ್ನು ಗಲ್ಲಿಗೇರಿಸೋದು ಖಚಿತವಾಗುತ್ತಿದ್ದಂತೆ ಜೈಲಿನ ಇತರೆ ಕೈದಿಗಳು ಆಕ್ರೋಶ ಹೊರಹಾಕಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಗಲ್ಲು ಪ್ರಕ್ರಿಯೆ ಮತ್ತು ಶವಗಳು ಜೈಲಿನಿಂದ ಹೊರಗೆ ಹೋಗುವರೆಗೂ ಇತರೆ ಕೈದಿಗಳನ್ನು ಸೆಲ್ ನಲ್ಲಿಯೇ ಇರಿಸಲಾಗಿತ್ತು. ಶಿಕ್ಷೆಗೆ ಗುರಿಯಾದ ನಾಲ್ವರ ಸೆಲ್ ನಲ್ಲಿ ಕೆಲ ವಸ್ತು ಮತ್ತು ಪತ್ರಗಳು ಲಭ್ಯವಾಗಿವೆ. ಇವೆಲ್ಲವನ್ನ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು. ನಾಲ್ವರಲ್ಲಿ ಇಬ್ಬರು ಕೆಲವು ಪತ್ರಗಳ ಬರೆದಿದ್ದಾರೆ ಎಂದು ಪ್ರಕಟವಾಗಿದೆ.
ಪ್ರತಿಯೊಬ್ಬರ ಖಾತೆಯಲ್ಲಿ 8 ರಿಂದ 10 ಸಾವಿರ: ನಾಲ್ವರು ದೋಷಿಗಳ ಖಾತೆಯಲ್ಲಿ 8 ರಿಂದ 10 ಸಾವಿರ ರೂ. ಹಣವಿದೆ. ದೋಷಿಗಳು ತಮ್ಮ ಕೊನೆಯಾಸೆಯಲ್ಲಿಯೂ ಯಾರಿಗೆ ಹಣ ನೀಡುವುದರ ಬಗ್ಗೆ ಹೇಳಿರಲಿಲ್ಲ. ಈಗ ಹಣವನ್ನು ಅವರ ಕುಟುಂಬಗಳಿಗೆ ನೀಡಲಾಗುತ್ತದೆ. ಕುಟುಂಬಸ್ಥರ ಭೇಟಿಯಾಗ್ತೀರಿ ಅಂತ ಕೇಳಿದಾಗ ನಾಲ್ವರು ಯಾವುದೇ ಉತ್ತರ ನೀಡಿರಲಿಲ್ಲ. ಓರ್ವ ಮಾತ್ರ ತನ್ನ ಸ್ನೇಹಿತನನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದನು. ಕುಟುಂಬಸ್ಥರಿಗೆ ಮಾತ್ರ ಭೇಟಿಯ ಅವಕಾಶ ಕಲ್ಪಿಸಿದ್ದರಿಂದ ಆತನ ಇಚ್ಛೆ ಪೂರ್ಣ ಮಾಡಲು ಸಾಧ್ಯವಾಗಿಲ್ಲ. ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಾಲ್ವರ ಮೃತದೇಹಗಳನ್ನು ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿದೆ.