ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದೀಗ ಈ ಪೋಸ್ಟ್ಗೆ ಬಿಜೆಪಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮಗ ವಿಜಯೇಂದ್ರನ ಫೋಟೋ ಹಾಕಿ ನಿಖಿಲ್ ಬೆಂಬಲಿಗರು ಪೋಸ್ಟ್ ಮಾಡಿದ್ದಾರೆ. ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಲೀಸ್ ವಿರೋಧಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಮಾಡುತ್ತಿದ್ದಾರೆ. ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲೇ ಬಿಎಸ್ವೈ ಮತ್ತು ಮಗ ವಿಜಯೇಂದ್ರ ಮಲಗಿದ್ದರು. ಆ ಫೋಟೋವನ್ನ ಕುಮಾರಸ್ವಾಮಿ ಬೆಂಬಲಿಗರು ಸ್ಟೇಟಸ್ ಹಾಕಿಕೊಂಡು ಬರೆದುಕೊಂಡಿದ್ದಾರೆ.
ನಿಖಿಲ್ ಫ್ಯಾನ್ಸ್ ಬರೆದುಕೊಂಡಿದ್ದೇನು?:
‘ಕುಮಾರಣ್ಣ ಹೇಳಿದ್ದರು ನಾನು ಅಧಿಕಾರಕ್ಕೆ ಬಂದರೆ ಕಳ್ಳನ್ನ, ಕಳ್ಳನ ಮಗನನ್ನು ಬೀದಿಯಲ್ಲಿ ಮಲಗಿಸುತ್ತೇನೆ. ಈಗ ಅದನ್ನ ಮಾಡಿ ತೋರಿಸಿದ್ದಾರೆ’ ಎಂದು ಫೇಸ್ಬುಕ್ ಸ್ಟೇಟಸ್ ಹಾಕಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಪೋಟರ್ಸ್ ಹೆಸರಿನ ಫೇಸ್ಬುಕ್ ಅಕೌಂಟ್ನಿಂದ ಈ ಪೋಸ್ಟ್ ಮಾಡಲಾಗಿದೆ. ಇದೀಗ ಈ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಶೋಕ್ ತಿರುಗೇಟು:
ಈ ಫೋಸ್ಟ್ ಗೆ ಮಾಜಿ ಡಿಸಿಎಂ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿಯಲ್ಲಿ ಮಲಗುವವರು ಬಡವರು, ತಾಜ್ ವೆಸ್ಟೆಂಡ್ನಲ್ಲಿ ಮಲಗುವವರು ಕಳ್ಳರು. ನಾವು ಬಡವರ ಪರ ಅದಕ್ಕೆ ಬೀದಿಯಲ್ಲಿ ಮಲಗುತ್ತಿದ್ದೇವೆ. ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಪೋಸ್ಟ್ ಹಾಕಿದರೆ ಅದು ಸಿಎಂ ಕಣ್ಣಿಗೆ ಕಾಣುತ್ತಿಲ್ವಾ? ಸಿಎಂ ತಮ್ಮ ವಿರುದ್ಧ ಮಾತಾಡಿದರೆ ಜೈಲಿಗೆ ಹಾಕುತ್ತಾರೆ. ಈಗ ಸಿಎಂ ಅವರ ಬೆಂಬಲಿಗರೇ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಅಪರಾಧ ಅಲ್ವ ಎಂದು ಪ್ರಶ್ನೆ ಮಾಡಿದ್ದಾರೆ.