ಮಂಡ್ಯ: ಮೈತ್ರಿ ಸರ್ಕಾರದ ಅಭ್ಯರ್ಥಿ ಇಂದು ಮೇಲುಕೋಟೆಯಲ್ಲಿ ಪ್ರಚಾರ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ನಟ ಯಶ್ ಮತ್ತು ದರ್ಶನ್ ಅವರಿಗೂ ಒಳ್ಳೆದಾಗಲಿ ಎಂದು ನಿಖಿಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಪುಟ್ಟರಾಜು ಮಾರ್ಗದರ್ಶನದಲ್ಲಿ ನಮ್ಮಂಥ ಯುವಕರು ನಡೆಯಬೇಕಾಗಿದೆ. ಇಂದು ಅವರ ಜೊತೆ ಪ್ರಚಾರ ಮಾಡುತ್ತಿದ್ದೇನೆ. ನನ್ನ ತಾಯಿಯವರು ಹಲವಾರು ತಾಲೂಕಿಗೂ ಹೋಗಿ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದು, ಅವರ ಆಶೀರ್ವಾದ ನನ್ನ ಮೇಲಿರುತ್ತದೆ ಎಂದರು.
ಯಶ್ ಮತ್ತು ದರ್ಶನ್ ಪ್ರಚಾರದ ಬಗ್ಗೆ ಏನೂ ಹೇಳಲ್ಲ. ಅವರಿಗೆ ಒಳ್ಳೆಯದಾಗಲಿ. ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿ ಆದ ನನಗೆ ಎಲ್ಲರ ವಿಶ್ವಾಸವಿದೆ. ಸ್ಥಳೀಯರಲ್ಲಿ ಸಣ್ಣಪುಟ್ಟ ಗೊಂದಲ ಇದ್ದರೂ ಎಲ್ಲವೂ ಸರಿಯಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಆಶೀರ್ವಾದದಿಂದ ಎಲ್ಲ ಒಳ್ಳೆದಾಗುತ್ತದೆ ಎಂದು ನಿಖಿಲ್ ಹೇಳಿದ್ದಾರೆ.
ರೋಡ್ ಷೋ ಮುಗಿದ ನಂತರ ಕುಮಾರಣ್ಣ, ದೇವೇಗೌಡರು, ಸಿದ್ದರಾಮಣ್ಣ ಎಲ್ಲರ ನೇತೃತ್ವದಲ್ಲಿ ದೊಡ್ಡ ಸಭೆಯಾಗುತ್ತದೆ. ತಾತ ಅವರು ನನಗೋಸ್ಕರ ನಾಳೆ(ಗುರುವಾರ) ಕೆ.ಆರ್ ಪೇಟೆ, ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡಲಿದ್ದಾರೆ. ಅವರು ತುಮಕೂರಲ್ಲಿ ಪ್ರಚಾರ ಮಾಡಬೇಕು. ನಾನು ಕೂಡ ತುಮಕೂರಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಇಂತಹ ಪುಣ್ಯ ಮತ್ತೆ ನನಗೆ ಸಿಗಲ್ಲ. ತಾತನ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಪಕ್ಷದ ಮೇಲಿದೆ. ಅವರು ನನ್ನ ಪರ ಪ್ರಚಾರಕ್ಕೆ ಬರುತ್ತಿರುವುದು ಖುಷಿಯಾಗುತ್ತಿದೆ ಎಂದರು.
ತಂದೆಯವರು ಯಾವತ್ತು ಜಾತಿ, ಬೇಧ ಭಾವ ಮಾಡದೇ ಕೆಲಸ ಮಾಡಿದ್ದಾರೆ. ಜಾತಿಯನ್ನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ತರಬಾರದು ಎಂದು ನಾಯ್ಡು ವರ್ಸಸ್ ಗೌಡ ಜಾತಿ ವಿವಾದದ ಬಗ್ಗೆ ಹೇಳಿದ್ದಾರೆ.