ಬೆಂಗಳೂರು: ಚಂದನವನದ ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಇದೇ ವರಮಹಾಲಕ್ಷ್ಮಿ (ಆಗಸ್ಟ್-9)ರಂದು ರಿಲೀಸ್ ಆಗಲಿದೆ. ಬಹುತಾರಗಣವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಪ್ರತಿಯೊಂದು ಪಾತ್ರಗಳು ಚಿತ್ರದಲ್ಲಿ ತನ್ನದೇಯಾದ ಪ್ರಾಮುಖ್ಯತೆಯನ್ನು ಹೊಂದಿವೆ. ಸೋಮವಾರ ರಾಕ್ಲೈನ್ ಮಾಲ್ ನಲ್ಲಿ ಏರ್ಪಡಿಸಿದ್ದ ಪ್ರೀಮಿಯರ್ ಶೋಗೆ ಆಗಮಿಸಿದ್ದ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿ ತಮಗೆ ಸಿನಿಮಾ ಸಿಕ್ಕಿದ್ದು ಹೇಗೆ ಎಂಬ ವಿಷಯವನ್ನು ತಿಳಿಸಿದರು.
ಚಿತ್ರ ವೀಕ್ಷಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ಒಮ್ಮೆ ಮೈಸೂರಿನಲ್ಲಿ ಮುನಿರತ್ನ ಅವರು ನಮ್ಮ ತಂದೆ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಮಾತನಾಡುವ ವೇಳೆ ನಾನೊಂದು ಕುರುಕ್ಷೇತ್ರ ಸಿನಿಮಾ ಮಾಡುತ್ತಿದ್ದ, ಅಭಿಮನ್ಯು ಪಾತ್ರಕ್ಕೆ ನಿಖಿಲ್ ಸೂಕ್ತ ಎಂದು ಹೇಳಿದ್ದರು. ನಂತರ ತಂದೆಯವರ ಸಲಹೆ ಮೇರೆಗೆ ಸಿನಿಮಾ ಒಪ್ಪಿಕೊಂಡು ಚಿತ್ರೀಕರಣದಲ್ಲಿ ಭಾಗಿಯಾದೆ ಎಂದು ಹೇಳಿದರು.
ಮುಂದಿನಗಳಲ್ಲಿ ಎಷ್ಟೇ ಚಿತ್ರ ಮಾಡಿದ್ರೂ, ಕುರುಕ್ಷೇತ್ರದ ಸಿನಿಮಾದಲ್ಲಿಯ ಪಾತ್ರ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇಷ್ಟೊಂದು ಕಲಾವಿದರನ್ನು ಸೇರಿಸಿ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡೋದು ಸುಲಭದ ಮಾತಲ್ಲ. ಆದ್ರೆ ನಿರ್ಮಾಪಕ ಮುನಿರತ್ನ ಅವರು ಕುರುಕ್ಷೇತ್ರ ಎಂಬ ಅದ್ಧೂರಿ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಈ ಸಿನಿಮಾ ನಿರ್ಮಿಸಿದ್ದಕ್ಕೆ ನಾನು ಎಲ್ಲರ ಪರವಾಗಿ ನಿಖಿಲ್ ಧನ್ಯವಾದ ತಿಳಿಸಿದರು.