ಮಂಡ್ಯ: ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ನಟ ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗದಲ್ಲಿ ಅವರದೇ ಕೊಡುಗೆ ನೀಡಿದ್ದಾರೆ. ಅಂಬರೀಶಣ್ಣನ ಸಹೋದರನಾಗಿ ಕುಮಾರಣ್ಣ ನಡೆದುಕೊಂಡ ರೀತಿ ನಿಮಗೆ ಗೊತ್ತಿದೆ. ನಾನು ಸಂಬಂಧಗಳಿಗೆ ಬೆಲೆ ಕೊಡುವ ಮನುಷ್ಯ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದ್ರು ಚುನಾವಣೆಗೆ ನಿಲ್ಲಬಹುದು. ಯಾರೇ ಚುನಾವಣೆಗೆ ನಿಂತರೂ ಸ್ವಾಗತಿಸೋಣ. ಅಂತಿಮ ತೀರ್ಪು ದೇವರಾದ ನೀವು ಕೊಡಬೇಕು. ನೀವು ಕೊಟ್ಟ ತೀರ್ಪಿಗೆ ನಾವೆಲ್ಲ ತಲೆಬಾಗುತ್ತೇವೆ ಎಂದು ಹೇಳಿದ್ದಾರೆ.
ನಾನು ಎಲ್ಲಿ ಉಳಿದುಕೊಳ್ಳಲಿ ಎಂದು ತಂದೆ ಜೊತೆ ಚರ್ಚೆ ಮಾಡಿದೆ. ಬಾಡಿಗೆ ಮನೆ ಬೇಡ ಎಂದು ಹೇಳಿದ್ದರು. ಅವರ ತೀರ್ಮಾನ ಸರಿಯಾಗಿರುತ್ತದೆ. ನಾನು ಬಾಡಿಗೆ ಮನೆ ಮಾಡಲು ಬಂದಿಲ್ಲ. ಸ್ವಂತ ತೋಟ ಮನೆ ಮಾಡಿ ನಿಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯಲು ಬಂದಿದ್ದೇನೆ. ಕುಮಾರಣ್ಣನಿಗೆ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಮರುಜನ್ಮ ಕೊಟ್ಟಿದ್ದು ಮಂಡ್ಯ ಜಿಲ್ಲೆ. ಹಾಗಾಗಿ ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಒಂದು ಬಾರಿ ಅವಕಾಶ ಮಾಡಿಕೊಡಲು ಸಾಧ್ಯವೇ ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಇದೇ ವೇಳೆ ಜನರು ನಿಖಿಲ್ ಅವರಿಗೆ ಹಾಡುವಂತೆ ಒತ್ತಾಯಿಸಿದ್ದಾರೆ. ಜನರ ಒತ್ತಾಯಕ್ಕೆ ಮಣಿದು ನಿಖಿಲ್ ‘ಸೀತಾರಾಮ ಕಲ್ಯಾಣ’ ಚಿತ್ರದ ‘ನಿನ್ನ ರಾಜ ನಾನು, ನನ್ನ ರಾಣಿ ನೀನು ಹಾಡು’ ಹೇಳಿ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ. ಬಳಿಕ ಮಳವಳ್ಳಿಯ ಮುಸ್ಲಿಂ ಬಾಂಧವರು ನಿಖಿಲ್ಗೆ ಖಡ್ಗ ನೀಡಿ ಗೌರವಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಿಖಿಲ್ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಖಡ್ಗ ಹಿಡಿದು ಕುರುಕ್ಷೇತ್ರ ಚಿತ್ರದಲ್ಲಿ ತಮ್ಮ ಅಭಿಮನ್ಯು ಪಾತ್ರ ನೆನೆದು, ಸಿನಿಮಾ ನೋಡುವಂತೆ ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv