-ನಿಖಿಲ್, ಪ್ರಜ್ವಲ್ ಇಬ್ಬರಲ್ಲಿ ಯಾರಾಗ್ತಾರೆ ಸಾಮ್ರಾಟ್?
ಬೆಂಗಳೂರು: ದಳಪತಿಗಳ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಗೌಡರ ಕುಟುಂಬದ ಕುಡಿಗಳು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇಬ್ಬರಲಿ ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶಿಸಿದರು. ಇತ್ತ ನಿಖಿಲ್ ಕುಮಾರಸ್ವಾಮಿ ಮೊದಲ ಚುನಾವಣೆಯಲ್ಲಿಯೇ ಸೋಲಿನ ರುಚಿ ನೋಡಿದರು. ಇದೀಗ ಇಬ್ಬರಲ್ಲಿ ದಳಪತಿಗಳ ಮುಂದಿನ ಅಧಿಪತಿ ಯಾರಾಗ್ತಾರೆ ಎಂಬುದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಮೊದಲ ಚುನಾವಣೆಯಲ್ಲಿ ಹೊಡೆತ ತಿಂದಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯ ಅಥವಾ ಸಿನಿಮಾದಲ್ಲಿ ಮುಂದುವರಿಯಬೇಕಾ ಎಂಬ ಗೊಂದಲದಲ್ಲಿದ್ದಾಗ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದ್ದಾರೆ. ಜಾತಕ ನೋಡಿರುವ ಕಮಲಾಕರ್ ಭಟ್ಟರು ಮುಂದಿನ ದಿನಗಳಲ್ಲಿ ನಿಖಿಲ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ರಾಜಕೀಯ ಕೈ ಹಿಡಿಯಲ್ಲ, ಕಾಯಬೇಕು. 2020ರ ನಂತರ ರಾಜಕೀಯ ಬದುಕು ಸಂಪೂರ್ಣ ಬದಲಾಗಲಿದೆ. ಕಳೆದುಕೊಂಡ ಜಾಗದಲ್ಲಿಯೇ ಮತ್ತೆ ಗೆಲುವನ್ನು ಹುಡುಕುವ ಪ್ರಯತ್ನ ಮಾಡಿದ್ರೆ ಫಲವಿದೆ. ಅಂದರೆ ಸೋತ ಮಂಡ್ಯ ಕ್ಷೇತ್ರದಲ್ಲಿಯೇ ಮತ್ತೆ ಸ್ಫರ್ಧಿಸಿದ್ರೇ ನಿಖಿಲ್ಗೆ ಗೆಲ್ಲುವ ಅವಕಾಶವಿದೆ ಎಂದು ಕಮಲಾಕರ್ ಭಟ್ಟರು ಭವಿಷ್ಯ ನುಡಿದಿದ್ದಾರೆ.