– ಹಾಸನಕ್ಕೆ ಪ್ರಜ್ವಲ್, ರೇವಣ್ಣ ಸೀಮಿತ
– ಜನರ ಆಶೀರ್ವಾದವಿದ್ದರೆ ಸ್ಪರ್ಧೆ
ರಾಮನಗರ: ಜನರ ಆಶೀರ್ವಾದವಿದ್ದರೆ ಮುಂದೊಂದು ದಿನ ರಾಮನಗರದಿಂದಲೇ ಸ್ಪರ್ಧೆ ಮಾಡಬಹುದು ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ರಾಮನಗರ ಹೊರವಲಯದಲ್ಲಿರುವ ಜಾನಪದ ಲೋಕದ ಬಳಿ ಮೊಮ್ಮಗ ನಿಖಿಲ್ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಗಳನ್ನು ವೀಕ್ಷಿಸಿದ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ನಿಖಿಲ್ ಸ್ಪರ್ಧಿಸುವ ಸುಳಿವು ನೀಡಿದರು.
ಹಾಸನಕ್ಕೆ ಪ್ರಜ್ವಲ್, ರೇವಣ್ಣ ಸೀಮಿತರಾಗಿದ್ದಾರೆ. ರಾಮನಗರದಲ್ಲಿ ನಾನು, ಕುಮಾರಸ್ವಾಮಿ ಇದ್ದೇವೆ. ನಿಖಿಲ್ ರಾಜಕೀಯ ಜೀವನ ದೈವದ ಆಟವಾಗಿದ್ದು ಜನರ ಒತ್ತಾಯಕ್ಕೆ ನಾವು ಮಣಿಯಲೇಬೇಕು. ರಾಮನಗರಕ್ಕೆ ನಿಖಿಲ್ ಬರುತ್ತಾನೆ ಎಂದು ಈ ವೇಳೆ ತಿಳಿಸಿದರು.
ಮಂಡ್ಯಕ್ಕೆ ನಿಖಿಲ್ ಹೋಗಿದ್ದು ಆಕಸ್ಮಿಕ. ಆದರೆ ಈಗ ಮಂಡ್ಯಕ್ಕೆ ಪಕ್ಷ ಕಟ್ಟಲು ಹೋಗುತ್ತಾನೆ. ನಮಗೆ ರಾಜಕೀಯ ಶಕ್ತಿ ನೀಡಿರುವುದು ರಾಮನಗರ, ಮಂಡ್ಯ, ತುಮಕೂರು. ರಾಮನಗರದಿಂದ ನಾನು ಸಿಎಂ ಆಗಿ ಪ್ರಧಾನಿ ಆಗಿದ್ದೇನೆ. ಹಾಗೇ ನಿಖಿಲ್ ಇಲ್ಲೇ ಬೆಳೆಯಬೇಕು ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು. ಇದನ್ನೂ ಓದಿ: 8 ಲಕ್ಷ ಲಗ್ನ ಪತ್ರಿಕೆ ಮುದ್ರಣ, ನಿಖಿಲ್ ಲಗ್ನಪತ್ರಿಕೆಯ ಜೊತೆಗೆ ಸೀರೆ, ಪಂಚೆ, ಶರ್ಟ್ ಗಿಫ್ಟ್
ನಮ್ಮ ವಂಶಕ್ಕೆ ಎರಡನೇ ಶಕ್ತಿ ಕೊಟ್ಟಿದ್ದು ರಾಮನಗರ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿದರೂ ರಾಜಕೀಯವಾಗಿ ಬೆಳೆಸಿದ್ದು ಮಾತ್ರ ರಾಮನಗರ ಜಿಲ್ಲೆ. ಕುಮಾರಸ್ವಾಮಿ ಸಹ ರಾಮನಗರದದಿಂದ ಸಿಎಂ ಆಗಿದ್ದಾರೆ. ಹೀಗಾಗಿ ನಿಖಿಲ್ ಸಹ ರಾಮನಗರದಿಂದಲೇ ಬೆಳೆಯಬೇಕು ಎಂಬುದು ನನ್ನ ಇಚ್ಛೆ ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಮತ್ತು ಚೆನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡು ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜಯಗಳಿಸಿದ್ದರು.