ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಹಾಗೂ ಜೆಡಿಎಸ್ ಸ್ಟಾರ್ ಕ್ಯಾಂಪೇನರ್ ನಿಖಿಲ್ ಕುಮಾರಸ್ವಾಮಿ ನಡುವೆ ಟಾಕ್ ವಾರ್ ಜೋರಾಗಿದೆ.
ಶುಕ್ರವಾರ ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದ ಎಚ್.ಸಿ ಬಾಲಕೃಷ್ಣ ರವರು ನಿಖಿಲ್ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಸಿನಿಮಾ ನಟರು ಬಂದು ನಾವು ಬೆನ್ನಿಗೆ ಚೂರಿ ಹಾಕ್ತಾರೆ ಅಂತಾ ಹೇಳ್ತಾರೆ. ಅವರು ಬಂದು ಕೇವಲ ಪ್ರಚಾರ ಮಾಡಿಕೊಂಡು ಮತ ಕೇಳಿಕೊಂಡು ಹೋಗಬೇಕು. ಅದನ್ನ ಬಿಟ್ಟು ಅವರೇನಾದರೂ ಮಾತನಾಡಿದರೆ, ನಮ್ಮ ಬಳಿ ಬೇಜಾನ್ ಕ್ಯಾಸೆಟ್ಗಳಿವೆ ನಾನು ಹೊರಗೆ ತೆಗೆಯುತ್ತೇನೆ ಎಂದು ಹೇಳಿದ್ದರು.
ಇದೇ ವಿಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಎದುರೇಟು ನೀಡಿದ್ದು, ಯಾವ ಕ್ಯಾಸೆಟ್ಗಳಿವೆ ತಾಕತ್ ಇದ್ದರೆ ಬಿಡುಗಡೆ ಮಾಡಲಿ ನಾನೇನ್ ಮಾಡಿದ್ದೀನಿ. ಅವರ ಯೋಗ್ಯತೆ ಏನು ಎಂದು ಆರೂವರೆ ಕೋಟಿ ಜನತೆ ಕಂಡಿದ್ದಾರೆ. ಯಾವ ರೀತಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಈ ಚುನಾವಣೆ ಮುಗಿದ ಮೇಲೆ ಬಾಲಕೃಷ್ಣ ಅವರು ರಾಜಕೀಯದಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಅದೇಗೆ ರಾಜಕೀಯ ಮಾಡುತ್ತಾರೆ ಎಂದು ನೋಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದ್ಯ ಬಾಲಕೃಷ್ಣ ಅವರು ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದು, ನಿಖಿಲ್ ಅವರು ಕೆಲ ವಿಚಾರಗಳನ್ನು ಹಗುರವಾಗಿ ಮಾತನಾಡುತ್ತಾರೆ. ಈ ರೀತಿ ಮಾತನಾಡುವುದು ಬೇಡ. ಎಚ್ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಮಾತನಾಡುತ್ತಾರೆ. ಅವರು ಸಕ್ರೀಯ ರಾಜಕಾರಣದಲ್ಲಿದ್ದಾರೆ. ನಿಖಿಲ್ ಅವರು ರಾಜಕಾರಣದಲ್ಲಿ ಇನ್ನು ಚಿಕ್ಕವರಾಗಿದ್ದು, ಬಹಳ ದೂರ ಸಾಗಬೇಕು ಎಂದು ಹೇಳಿದ್ದೇನೆ ಅಷ್ಟೇ. ಆದರೆ ಯಾವುದೇ ಕ್ಯಾಸೆಟ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿಲ್ಲ. ದೇವೇಗೌಡ ಅವರ ಕುಟುಂಬಕ್ಕೆ ಹೆಚ್ಚಿನ ಗೌರವ ಇದ್ದು, ಆ ಮಟ್ಟಕ್ಕೆ ಮಾತನಾಡಬೇಕು. ಇದನ್ನೂ ಮೀರಿ ಮಾತನಾಡಿದರೆ ಏನು ಮಾಡಲು ಸಾಧ್ಯವಿಲ್ಲ ಅಂತಾ ಅಂದ್ರು. ಇದನ್ನು ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್