ಹಾಸನ: ರೈಡರ್ ಚಿತ್ರ ಬಿಡುಗಡೆಯಾದ 9 ಗಂಟೆಯಲ್ಲಿ 25 ಲಕ್ಷ ಜನ ವೆಬ್ ಸೈಟ್ಗಳಲ್ಲಿ ಪೈರಸಿ ಚಿತ್ರ ವೀಕ್ಷಿಸಿದ್ದಾರೆ. ಪೈರಸಿಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದರೂ ಒಂದಿಷ್ಟು ಜನ ಕನ್ನಡ ಸಿನಿಮಾಗಳನ್ನು ಹಾಳು ಮಾಡಲು, ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎಲ್ಲರೂ ಕಷ್ಟಪಟ್ಟು ಉತ್ತಮ ಕಥೆ ಆಯ್ಕೆ ಮಾಡಿ ಹೈಕ್ವಾಲಿಟಿ ಸಿನಿಮಾ ಮಾಡಿರುತ್ತೇವೆ. ಅದನ್ನು ಮೊಬೈಲ್ನಲ್ಲಿ ನೋಡುವುದು ಅಷ್ಟು ಚೆನ್ನಾಗಿ ಇರುವುದಿಲ್ಲ ಎಂದು ನಿಖಿಲ್ ಹೇಳಿದರು.
ಇದೇ ವೇಳೆ ಡಿಸೆಂಬರ್ 31ರ ರಾಜ್ಯ ಬಂದ್ ಕರೆಯ ಹಿನ್ನೆಲೆಯಲ್ಲಿ ಮಾತನಾಡಿದ ನಿಖಿಲ್, ಎರಡು ವರ್ಷಗಳ ಕೊರೊನಾ ಸಂಕಷ್ಟದ ನಂತರ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಬಂದ್ ಮಾಡುವುದರಿಂದ ಕನ್ನಡ ಚಿತ್ರಗಳಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂದರು. ಇದನ್ನೂ ಓದಿ: ರೈಡರ್ ಸಿನಿಮಾ ಪೈರಸಿ – ಸೈಬರ್ ಕ್ರೈಂ ಠಾಣೆಯಲ್ಲಿ ದೂರು
ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಬಂದ್ ಸೀಮಿತವಾಗಬಾರದು. ಅಂತಹ ಬಂದ್ ನಮಗೆ ಅವಶ್ಯಕತೆ ಇಲ್ಲ. ಬಂದ್ಗೆ ಕರೆ ಕೊಟ್ಟಿರುವವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ಮನವಿ ಮಾಡಿದರು.
ಇದೇ ಸಮಯದಲ್ಲಿ ತಂದೆ ಹೆಚ್ಡಿ ಕುಮಾರಸ್ವಾಮಿ, ನಿಖಿಲ್ ಸಿನಿಮಾದಲ್ಲಿ ಮುಂದುವರಿಯಲಿ ಎಂಬ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್, ಅವರ ಮಾತಿನ ಉದ್ದೇಶ ಅದಲ್ಲ. ನನ್ನನ್ನು ಒಬ್ಬ ಕಲಾವಿದನಾಗಿ ಜನರು ಗುರುತಿಸುತ್ತಿದ್ದಾರೆ. ಅದು ನನಗೆ ಹೆಮ್ಮೆ ಇದೆ. ಇದರ ಹಿನ್ನೆಲೆಯಲ್ಲಿ ನನ್ನ ತಂದೆ ಸಿನಿಮಾ ಮಾಡಬೇಕು, ಬಿಡಬಾರದು ಎಂದು ಕಿವಿಮಾತು ಹೇಳಿದ್ದಾರೆ. ನನ್ನ ವೃತ್ತಿ ಸಿನಿಮಾ. ರಾಜಕೀಯದ ವಿಚಾರ ಬಂದಾಗ ಅದರ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ