ಬೆಂಗಳೂರು: ಈಗಾಗಲೇ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಸಾಕಷ್ಟು ಪ್ರಜ್ವಲಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನ ಅವರು ತೆರೆಮರೆಯಲ್ಲಿ ಇರುವುದು ಉತ್ತಮ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವೈಎಸ್ವಿ ದತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇನ್ ಸ್ಟ್ರೀಮ್ ಪಾಲಿಟಿಕ್ಸ್ ಗೆ ನಿಖಿಲ್, ಪ್ರಜ್ವಲ್ ಬರೋದು ಬೇಡ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ದೂರ ಇರೋದು ಉತ್ತಮ. ಯಾಕಂದರೆ ಈಗಾಗಲೇ ನಿಖಿಲ್ ಮತ್ತು ಪ್ರಜ್ವಲ್ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಮೂಲಕ ಇಬ್ಬರೂ ಪ್ರಜ್ವಲಿಸುತ್ತಾ ಇದ್ದಾರೆ. ಹೀಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದ್ದಾರೆ. ಈ ಮೂಲಕ ದತ್ತಾ ಅವರು ಕುಟುಂಬ ರಾಜಕಾರಣವನ್ನ ವಿರೋಧಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಶ್ವನಾಥ್ ಅವರು ಮುಂದುವರಿಯುವುದೇ ಸೂಕ್ತ. ಈಗಾಗಲೇ ದೇವೇಗೌಡರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ವಿಶ್ವನಾಥ್ ಅವರ ಮಾರ್ಗದರ್ಶನ ದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.