ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರರನ್ನು ಪ್ರಶ್ನಿಸಿದಕ್ಕೆ ನೈಜಿರಿಯನ್ಸ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದ ನೈಜಿರಿಯನ್ಸ್ ಪ್ರಜೆಗಳಿಬ್ಬರನ್ನು ಪೊಲೀಸರು ತಡೆದಿದ್ದರು. ಬಳಿಕ ಹೆಲ್ಮೆಟ್ ಹಾಗೂ ದಾಖಲೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಪ್ರಶ್ನಿಸುತ್ತಿದ್ದಂತೆ ಇಬ್ಬರು ಜೋರು ಧ್ವನಿಯಲ್ಲಿ ಗಲಾಟೆ ಶುರು ಮಾಡಿ, ಎಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆ ತಡೆಯುವುದಕ್ಕೆ ಹೋದ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ.
ನಗರದ ಹೆಣ್ಣೂರು, ಕಮ್ಮನಹಳ್ಳಿ, ಅಮೃತಹಳ್ಳಿ, ಬಾಗಲೂರು, ರಾಮಮೂರ್ತಿನಗರ ಭಾಗದಲ್ಲಿ ಹೆಚ್ಚಾಗಿ ನೈಜಿರಿಯನ್ಸ್ ವಾಸ ಮಾಡುತ್ತಿದ್ದಾರೆ. ಇವರು ಯಾರಿಗೂ ಹೆದರುವುದಿಲ್ಲ. ಅಲ್ಲದೆ ಪೊಲೀಸರು ಕೂಡ ಇವರನ್ನು ತಡೆಯುವುದಕ್ಕೆ ಭಯಪಡುತ್ತಾರೆ. ಏಕೆಂದರೆ ಸುಖಾಸುಮ್ಮನೆ ಕೇಸ್ ಹಾಕುತ್ತಾರೆ, ಹೆಚ್ಚು ಕಡಿಮೆ ಆದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತೆ ಎಂದು ನೋಡಿ ನೋಡದ ರೀತಿ ವರ್ತಿಸಿದ್ದಾರೆ.
ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹಿಂದಿ, ಇಂಗ್ಲೀಷ್ ಭಾಷೆ ಬಿಟ್ಟು ಅವರ ಸ್ಥಳೀಯ ಭಾಷೆಯಲ್ಲಿ ಮಾತಾನಾಡುವುದಕ್ಕೆ ಶುರು ಮಾಡುತ್ತಾರೆ. ಪೊಲೀಸರು ಎಷ್ಟೇ ಹೇಳಿದರೂ, ಅದೇ ಅರ್ಥವಾಗದ ಭಾಷೆಯಲ್ಲಿ ಜಗಳಕ್ಕೆ ಬಿದ್ದು ನಡುರಸ್ತೆಯಲ್ಲೇ ಹೈಡ್ರಾಮ ಮಾಡುತ್ತಾರೆ. ಕೊನೆಗೆ ಅವರ ಹತ್ತಿರ ಜಗಳ ಮಾಡುವುದಕ್ಕೆ ಆಗದೇ ಪೊಲೀಸರೇ ಅವರನ್ನು ಬಿಟ್ಟು ಕಳುಹಿಸುತ್ತಾರೆ.
ಹಲ್ಲೆಗೊಳಾಗಾದ ಪೊಲೀಸರು ಸಹ ಈ ಬಗ್ಗೆ ದೂರು ನೀಡಲು ಹೋಗುವುದಿಲ್ಲ. ಯಾಕೆ ದೂರು ನೀಡುವುದಿಲ್ಲ ಎಂದು ಪೊಲೀಸರಲ್ಲಿ ಪ್ರಶ್ನಿಸಿದಾಗ, ನಾವು ದೂರು ನೀಡಿದರೆ ಅವರ ದೇಶದ ರಾಯಭಾರಿ ಕಚೇರಿಯಿಂದ ನೋಟಿಸ್ ಕಳುಹಿಸುತ್ತಾರೆ. ನೋಟಿಸ್, ಕೇಸ್ ಎಂದು ಓಡಾಡುವುದಕ್ಕೆ ನಮಗೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.