ನವದೆಹಲಿ: ಗ್ಯಾಂಗ್ಸ್ಟರ್ (Gangster) ಹಾಗೂ ಭಯೋತ್ಪಾದನೆಗೆ (Terrorism) ಸಂಬಂಧಪಟ್ಟಂತಹ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುಮಾರು 20 ಕಡೆಗಳಲ್ಲಿ ದಾಳಿ ನಡೆಸಿದೆ.
ಲಾರೆನ್ಸ್ ಬಿಷ್ಣೋಯ್, ನೀರಜ್ ಬವಾನಾ ಹಾಗೂ ಟಿಲ್ಲಿ ತಾಜ್ಪುರಿಯಾ ಸೇರಿದಂತೆ 6 ಗ್ಯಾಂಗ್ಸ್ಟರ್ಗಳ ವಿಚಾರಣೆಯ ಬಳಿಕ ಎನ್ಐಎ ದೆಹಲಿ-ಎನ್ಸಿಆರ್, ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್ನಾದ್ಯಂತ 20 ಸ್ಥಳಗಳಲ್ಲಿ ದಾಳಿ ನಡೆಸಲು ಪ್ರಾರಂಭಿಸಿದೆ.
ಮೂಲಗಳ ಪ್ರಕಾರ, 6 ಮಂದಿ ಗ್ಯಾಂಗ್ಸ್ಟರ್ಗಳ ವಿಚಾರಣೆ ವೇಳೆ ಇನ್ನೂ ಹಲವು ಗ್ಯಾಂಗ್ಸ್ಟರ್ಗಳ ಹೆಸರುಗಳು ಬಯಲಿಗೆ ಬಂದಿವೆ. ಎನ್ಐಎ ಬಂಧಿತ ಗ್ಯಾಂಗ್ಸ್ಟರ್ಗಳ ಮನೆಗಳು, ಅವರಿಗೆ ಸಹಾಯ ಮಾಡುತ್ತಿದ್ದವರು ಹಾಗೂ ಅವರಿಗೆ ಸಂಬಂಧಪಟ್ಟ ಇತರ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್ಎಫ್
ಈ ಗ್ಯಾಂಗ್ಸ್ಟರ್ಗಳು ಇತರ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಹಾಗೂ ಬವಾನಾ ಗ್ಯಾಂಗ್ ಹೆಸರಿನಲ್ಲಿ ಭಾರತದಲ್ಲಿ ಭಯೋತ್ಪಾದನೆಗಾಗಿ ಸಾಕಷ್ಟು ಹಣ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧಿಸಲಾದ ಎಲ್ಲಾ ಗ್ಯಾಂಗ್ಸ್ಟರ್ಗಳ ವಿಚಾರಣೆಯ ಆಧಾರದ ಮೇಲೆ ಎನ್ಐಎ ಪಾಕಿಸ್ತಾನ-ಐಎಸ್ಐ ಮತ್ತು ಗ್ಯಾಂಗ್ಸ್ಟರ್ಗಳ ನಂಟಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹನಿಟ್ರ್ಯಾಪ್ ಚಕ್ರವ್ಯೂಹ- ಸಂಸಾರ, ಕೆಲಸ, ಎಲ್ಲವೂ ಕಳೆದುಕೊಂಡ ಟೆಕ್ಕಿ!