ಬೆಂಗಳೂರು: ಪ್ರತಿಭಟನಾ ನಿರತ ಎನ್ಹೆಚ್ಎಮ್ (NHM) ಒಳಗುತ್ತಿಗೆ ನೌಕರರಿಗೆ ಆರೋಗ್ಯ ಇಲಾಖೆ (Department of Health and Family Welfare Services) ಎಸ್ಮಾ (ESMA) ಜಾರಿಗೊಳಿಸಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲವೇ ಇಲಾಖೆ ನೌಕರರು ಕಾನೂನಾತ್ಮಕ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ಒಂದು ತಿಂಗಳನಿಂದ ಪ್ರತಿಭಟನೆ ಮುಂದುವರೆಸಿರುವುದು ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದೆ. ಮಾರ್ಚ್ 16 ರಂದು ನೀಡಿದ ಎಚ್ಚರಿಕೆಯನ್ನು ಮೀರಿ ಮೀರಿ ಪ್ರತಿಭಟನೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಎಸ್ಮಾ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ – ಎಫ್ಐಆರ್ ದಾಖಲು
ಮಣಿಪುರ ರಾಜ್ಯವನ್ನು ಹೊರತುಪಡಿಸಿ, ಒಡಿಸ್ಸಾ, ಪಂಜಾಬ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ರಾಜಸ್ಥಾನ ಇತರೆ ರಾಜ್ಯಗಳಲ್ಲಿ ಎನ್ಹೆಚ್ಎಂ ಒಳಗುತ್ತಿಗೆ ನೌಕರರನ್ನ ಖಾಯಂಗೊಳಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ (Karnataka) ನಮ್ಮನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವು 2005 ರಿಂದ ಜಾರಿಯಲ್ಲಿದ್ದು ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರವಾಗಿದೆ. ಇದು ಮಿಷನ್ ಮೋಡ್ ಪ್ರಾಜೆಕ್ಟ್ ಆಗಿರುವುದರಿಂದ ನಿಗದಿಪಡಿಸಿದ ಉದ್ದೇಶ ಹಾಗೂ ಗುರಿಗಳು ಸಫಲವಾದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳುವುದರ ಬಗ್ಗೆ ಕೇಂದ್ರ ಸರ್ಕಾರವು ತಿರ್ಮಾನಿಸುತ್ತದೆ.
ಈ ಯೋಜನೆಯಲ್ಲಿ ಸುಮಾರು 53 ಕಾರ್ಯಕ್ರಮಗಳು ರಾಜ್ಯದಲ್ಲಿ ವಿವಿಧ ಹಂತದಲ್ಲಿ ಜಾರಿಯಲ್ಲಿರುತ್ತವೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಒಳಗುತ್ತಿಗೆ ಆಧಾರದ ಮೇಲೆ 26,943 ಮತ್ತು 3,631 ಹೊರಗುತ್ತಿಗೆ ಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಪ್ರಮುಖ ಬೇಡಿಕೆಯಂದ ಸಂಬಳವನ್ನು ಏರಿಸಲಾಗಿದ್ದು, ಮಾರ್ಚ್ 4 ರಂದು ಶೇ.15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಆಶ್ವಾಸನೆ ನೀಡಿದ್ದಾರೆ.
ಏನಿದು ಎಸ್ಮಾ?
ಎಸ್ಮಾ ಎಂದರೆ (Essential Services Maintenance Act), ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎಂದರ್ಥ. ಸರ್ಕಾರಿ ನೌಕರನನ್ನು ನಿಯಂತ್ರಣ ಮಾಡುವ ಕಾಯ್ದೆ 1968 ರಿಂದ ಜಾಲ್ತಿಯಲ್ಲಿದ್ದು, ಕರ್ನಾಟಕದಲ್ಲಿ ಎಸ್ಮಾ ಕುರಿತು 1994ರಲ್ಲಿ ಕಾನೂನಿನ ಮೊದಲ ರೂಪುರೇಷೆ ತಯಾರಾಯಿತು. 2013ರ ಜೂನ್ ನಿಂದ ರಾಜ್ಯದಲ್ಲಿ ಕಾನೂನಾಗಿ ಮಾರ್ಪಾಡಾಯಿತು. ನಂತರ 2015 ರಲ್ಲಿ ಸರ್ಕಾರ ಕೆಲ ತಿದ್ದುಪಡಿ ಮಾಡಿದೆ.
ಪರಿಣಾಮ ಏನು?
ಎಸ್ಮಾ ಎಂದರೆ ಕಡ್ಡಾಯ ಕೆಲಸ. ಸಂವಿಧಾನದಲ್ಲಿ ತಿಳಿಸಿರುವಂತೆ, 7ರಲ್ಲಿನ 2ನೇ ಪಟ್ಟಿಯಲ್ಲಿರುವ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಶಿಕ್ಷೆಯನ್ನು ನೀಡುವ ಸಾಧ್ಯತೆಯೂ ಇರುತ್ತದೆ ಎಂಬ ಉಲ್ಲೇಖವಿದೆ. ಎಸ್ಮಾ ಜಾರಿಯಲ್ಲಿದ್ದ ಮೇಲೆ ಅದನ್ನು ಧಿಕ್ಕರಿಸಿ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಉದ್ಯೋಗಿಗಳು ಹಠ ಮುಂದುವರಿಸಿದರೆ ಕೊನೆಯ ಅಸ್ತ್ರವಾಗಿ ಎಸ್ಮಾ ಜಾರಿಗೊಳಿಸುತ್ತದೆ. ಇದನ್ನೂ ಓದಿ: ಈಕ್ವೆಡಾರ್ನಲ್ಲಿ 6.8 ತೀವ್ರತೆಯ ಭಾರೀ ಭೂಕಂಪ – 14 ಜನ ಬಲಿ