ನವದೆಹಲಿ: ಇಲ್ಲದೇ ಇರುವ ಕಾರ್ಖಾನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿಯ (Delhi) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) 25,000 ರೂ. ದಂಡ ವಿಧಿಸಿದೆ.
ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ನಲ್ಲಿರುವ ಭಾರತ್ ಬ್ರಾಸ್ ಇಂಟರ್ನ್ಯಾಷನಲ್ ಕಾರ್ಖಾನೆ (Bharat Brass International) ಪರಿಸರಕ್ಕೆ ಹಾನಿಯಾಗುವಂತಹ ವಿಷಕಾರಿ ಪದಾರ್ಥಗಳನ್ನು ಹೊರಚೆಲ್ಲುತ್ತಿದೆ. ಇದು ಪರಿಸರ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರ ವಸೀಮ್ ಅಹ್ಮದ್ ಆರೋಪಿಸಿದ್ದರು. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್ಐ ಹೋಲಿಕೆ – ಖರ್ಗೆಗೆ ಸಮನ್ಸ್ ಕೋರ್ಟ್ ಸಮನ್ಸ್
ಮಾರ್ಚ್ನಲ್ಲಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾಯಾಲಯ ಮೊರಾದಾಬಾದ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಮೇ 9 ರಂದು ಸಮಿತಿಯು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು.
ವರದಿ ಸಿಕ್ಕ ಬಳಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್, ಸುಧೀರ್ ಅಗರ್ವಾಲ್ ಹಾಗೂ ಪರಿಸರ ತಜ್ಞ ಸದಸ್ಯ ಪ್ರೊ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ, ಆರೋಪ ದೋಷಪೂರಿತವಾಗಿದೆ. ಅಲ್ಲದೆ ಸಮಿತಿ ನಡೆಸಿದ ತನಿಖೆಯ ವೇಳೆ ಆರೋಪಿಸಲಾದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಕಾರ್ಖಾನೆ ಇಲ್ಲ ಎಂದು ತಿಳಿದು ಬಂದಿದೆ. ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಅರ್ಜಿದಾರರು ಮಾಡಿದ್ದಾರೆ ಎಂದು ನ್ಯಾಯಾಲಯ ಗರಂ ಆಗಿದೆ.
ಅರ್ಜಿದಾರರಿಗೆ ವಿಧಿಸಲಾದ ದಂಡವನ್ನು ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (Pollution Control Board) ಠೇವಣಿ ಇರಿಸಲು ಕೋರ್ಟ್ ಸೂಚಿಸಿದೆ. ದಂಡ ಪಾವತಿಗೆ ವಿಫಲವಾದರೆ ಮುಂದಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಒಬ್ಬರೇ ಕೆಲಸ ಮಾಡಿದ್ದರೆ ನಾನ್ಯಾಕೆ ಪ್ರಚಾರದಲ್ಲಿ ತೊಡಗಬೇಕಿತ್ತು?- ಸಿಎಂ ಕುರ್ಚಿಗೆ ಸಿದ್ದು ವಾದ