ಬೆಂಗಳೂರು: ರಾಜ್ಯ ಬಿಜೆಪಿಯ ಯುವ ಶಾಸಕರಲ್ಲಿ ನಾಯಕತ್ವ ಗುಣ ಬರಲು ಮತ್ತು ರಾಜ್ಯದಲ್ಲಿ ಬಿಜೆಪಿ ಬೇರು ಗಟ್ಟಿಗೊಳಿಸಲು ಹೈಕಮಾಂಡ್ ಈಗಿನಿಂದಲೇ ಪ್ಲಾನ್ ಮಾಡುತ್ತಿದೆ. ರಾಜ್ಯ ಸಚಿವ ಸಂಪುಟವನ್ನು ಯಂಗಿಸ್ತಾನ್ ಸಂಪುಟವಾಗಿಸಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಆದರೆ ಹೈಕಮಾಂಡ್ ಸದ್ಯದಲ್ಲೇ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಪ್ಲಾನ್ ಜಾರಿ ಮಾಡುತ್ತಿಲ್ಲ. ಬದಲಾಗಿ ಮುಂಬರುವ ಸಂಪುಟ ಪುನಾರಚನೆಯಲ್ಲಿ ತನ್ನ ಪ್ಲಾನ್ ಅಳವಡಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತದೆ.
ಸದ್ಯ ಮಿತ್ರಮಂಡಳಿಯ ಸದಸ್ಯರ ಋಣ ಸಂದಾಯಕ್ಕಾಗಿ ಈ ಸಲದ ವಿಸ್ತರಣೆಯನ್ನು ಮೀಸಲಿಡಲಾಗಿದೆ. ಹಾಗಾಗಿ ಈ ಸಂಪುಟ ವಿಸ್ತರಣೆ ಟಚ್ ಮಾಡಲು ಹೋಗಲ್ಲ ಬಿಜೆಪಿ ಹೈಕಮಾಂಡ್. ಮುಂದೆ ಒಂದು ವರ್ಷದೊಳಗೆ ಸಂಪುಟ ಪುನಾರಚನೆಯಾಗಲಿದ್ದು ಈ ಸಂದರ್ಭದಲ್ಲಿ ಎರಡು ವಿಚಾರದ ಮೇಲೆ ಹೈಕಮಾಂಡ್ ಫೋಕಸ್ ಮಾಡಿದೆ. ಮೊದಲನೇಯದು ಸಂಪುಟದಲ್ಲಿ ಕರಾವಳಿ ಶಾಸಕರ ಸೇರ್ಪಡೆ ಮಾಡಿಕೊಳ್ಳುವುದು. ಎರಡನೇಯ ಅಂಶ, ಹೊಸ ಮುಖಗಳ ಮೇಲೆ ವಿಶ್ವಾಸ ಇಟ್ಟು ಸಚಿವರನ್ನಾಗಿ ಮಾಡೋದು.
ಕರಾವಳಿಯೇ ಯಾಕೆ?
ಕರಾವಳಿ ಭಾಗದ ಶಾಸಕರು ಯಾವತ್ತೂ ಯಾವ ವಿಚಾರಕ್ಕೂ ಬೇಸರ ವ್ಯಕ್ತಪಡಿಸುವುದಿಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಅವಕಾಶ ವಂಚಿತರಾದರೂ ಸಾಫ್ಟ್ ಆಗಿಯೇ ಇದ್ದು ನಿಷ್ಠೆ, ಶಿಸ್ತು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಕರಾವಳಿ ಶಾಸಕರು ಅವಕಾಶ ವಂಚಿತರಾದಾಗ ವಿರೋಧ ವ್ಯಕ್ತಪಡಿಸಲ್ಲ ಅಂತ ಅವರನ್ನು ಕೈಬಿಡೋದು ಸರಿಯಲ್ಲ ಎನ್ನುವ ಅನುಕಂಪ ಬೆರೆತ ಆಲೋಚನೆ ಈಗ ಹೈಕಮಾಂಡ್ ಮನಸ್ಸಿನಲ್ಲಿ ಮೊಳೆತಿದೆ. ಹಾಗಾಗಿ ಕರಾವಳಿ ಭಾಗಕ್ಕೆ ಆದ್ಯತೆ ಕೊಡಲೇಬೇಕು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಬಿಜೆಪಿ ಪಾಳಯದ ಮಾಹಿತಿಯನ್ವಯ ಮುಂದಿನ ಸಂಪುಟ ಪುನಾರಚನೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸುಳ್ಯದ ಶಾಸಕ ಎಸ್.ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಮಂತ್ರಿಗಿರಿ ಭಾಗ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ಮುಖಗಳಿಗೆ ಜವಾಬ್ದಾರಿ:
ಕಿರಿಯ ಮತ್ತು ಯುವ ಶಾಸಕರಿಗೆ ನಾಯಕತ್ವ ಹೊರೆಸಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ. ಮುಂದಿನ ಸಂಪುಟ ಪುನಾರಚನೆಯಲ್ಲಿ ಪಕ್ಷದ ಯುವ ಶಾಸಕರಿಗೆ ಸಿಗಲಿದೆ ಸಚಿವ ಸ್ಥಾನ? ಭವಿಷ್ಯದ ಸಚಿವರು ಯಾರಾಗಬಹುದು ಅನ್ನೋ ಲೆಕ್ಕಾಚಾರ ಪಕ್ಷದಲ್ಲಿ ಜೋರಾಗಿ ನಡೆಯುತ್ತಿದೆ.
ಯಾರಿಗೆ ಸಿಗಬಹುದು ಮಂತ್ರಿಗಿರಿ?
1. ಸುನೀಲ್ ಕುಮಾರ್
2. ದತ್ತಾತ್ರೇಯ ಪಾಟೀಲ್ ರೇವೂರ
3. ರಾಜಕುಮಾರ್ ಪಾಟೀಲ್ ತೇಲ್ಕೂರ್
4. ರಾಜುಗೌಡ
5. ಪ್ರೀತಂ ಗೌಡ
6. ಕುಡಚಿ ರಾಜೀವ್
7. ಹರ್ಷವರ್ಧನ್
8. ಅರವಿಂದ ಬೆಲ್ಲದ್