ಅಮರಾವತಿ: ಮಡದಿ ನೋಡಲು ಸಾಧಾರಾಣವಾಗಿ ಕಾಣಿಸುತ್ತಿದ್ದಾಳೆ ಎಂದು ಮನನೊಂದು ವರನೊಬ್ಬ ಮದುವೆಯಾಗಿ ಮೂರನೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರ ಪ್ರದೇಶದ ವಿಜಿಯಾನಗರಂ ನಗರದಲ್ಲಿ ನಡೆದಿದೆ.
ಶೇಖ್ ಮಥೀನ್ ಆತ್ಮಹತ್ಯೆಗೆ ಶರಣಾದ ವರ. ಮಥೀನ್ ಚಿಪುರಪಳ್ಳಿ ಮಂಡಳದ ಪೆಡನಾಡಿಪಳ್ಳಿಯ ಕಂದಾಯ ಅಧಿಕಾರಿಯಾಗಿದ್ದನು. ಇದೇ ಸೆಪ್ಟೆಂಬರ್ 2 ರಂದು ವಿಶಾಖಪಟ್ಟಣದ ಸಾಲೂರು, ರೈಲ್ವೇ ಕಾಲೋನಿಯ ಮೊಹಮೂದ್ ಮುಬೀನ್ ಎಂಬವರ ಜೊತೆ ವಿವಾಹವಾಗಿತ್ತು. ವಧು ನೋಡಲು ಸುಂದರವಾಗಿ ಕಾಣುತ್ತಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆಯ ಬಳಿಕ ಮಥೀನ್ ಮಡದಿಯು ನೋಡಲು ಸುಂದರವಾಗಿಲ್ಲ, ಆಕೆಯ ಮುಖದ ಮೇಲೆ ಕಪ್ಪು ಮೊಡವೆಗಳಿಗೆ, ಹೀಗಾಗಿ ನನಗೆ ಇಷ್ಟವಿಲ್ಲವೆಂದು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದನು. ತಾಯಿಯು ಮುಬೀನಾಳಿಗೆ ಚಿಕಿತ್ಸೆ ನೀಡಿದರೆ ಸರಿಹೋಗುತ್ತದೆ ಚಿಂತಿಸಬೇಡ ಎಂದು ಸಮಾಧಾನ ಪಡಿಸಿದ್ದರು. ಆದರೆ ತಾಯಿಯ ಮಾತಿಗೆ ಮಥೀನ್ ಸಮಾಧಾನ ಹೊಂದಿರಲಿಲ್ಲ ತಿಳಿದು ಬಂದಿದೆ.
ಕಳೆದ ಮಂಗಳವಾರ ಎರಡೂ ಮನೆಯವರು ಆರತಕ್ಷತೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮಥೀನ್ ಬಾಬಾಮೆಟ್ಟದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿ ಬರುತ್ತೇನೆಂದು ಹೊರಟು, ಸ್ನೇಹಿತನ ಮನೆಯಲ್ಲೇ ನೇಣಿಗೆ ಶರಣನಾಗಿದ್ದಾನೆ. ಸ್ನೇಹಿತ ಮನೆಗೆ ಹೋಗುತ್ತಿರುವ ವಿಚಾರ ತಿಳಿದ ಸ್ನೇಹಿತರು ಹಾಗೂ ಆಕೆಯ ತಾಯಿ ಆತನಿಗೆ ಕರೆ ಮಾಡಲು ಯತ್ನಿಸುತ್ತಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಕೂಡಲೇ ಸ್ನೇಹಿತನ ಮನೆಗೆ ಬಂದು ನೋಡಿದಾಗ, ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಥೀನ್ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ, ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದ್ದಾರೆ.
ಪುತ್ರನ ಸಾವಿನಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ನನ್ನ ಮಗನ ಸಾವಿಗೆ ಮುಬೀನ ಕುಟುಂಬದವರೇ ಕಾರಣವೆಂದು ಆಕ್ರೋಶ ಹೊರಹಾಕಿದ್ದಾರೆ. ಮದುವೆಗೂ ಮುನ್ನ ಮುಬೀನ್ ಪೋಷಕರು ಬೇರೆ ಯುವತಿಯನ್ನು ತೋರಿಸಿದ್ದರು. ಮದುವೆಯ ವೇಳೆ ಮತ್ತೊಬ್ಬ ಯುವತಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮುಬೀನ್ ಕುಟುಂಬದವರ ವಿರುದ್ಧ ಮಥೀನ್ ತಾಯಿ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv