ಚಿತ್ರದುರ್ಗ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಕಳೆದ ವಾರವಷ್ಟೇ ವಿವಾಹವಾಗಿದ್ದು, ಈ ನವದಂಪತಿಗೆ ಇದೀಗ ಕಂಟಕ ಎದುರಾಗಿದೆ. ಜಾತಿ ಮರೆತು ಸಪ್ತಪದಿ ತುಳಿದ ಪ್ರೇಮಿಗಳಿಗೆ ಯುವತಿಯ ಪೋಷಕರು ವಿಲನ್ಗಳಾಗಿದ್ದಾರೆ.
ಸಮಾಜ ಅದೆಷ್ಟೇ ಮುಂದುವರೆದರೂ ಕೂಡ ಜನ ಜಾತಿ-ಧರ್ಮ ಅಂತ ಕಿತ್ತಾಡುವುದನ್ನು ನಿಲ್ಲಿಸುವುದಿಲ್ಲ. ಅಂತರ್ಜಾತಿ ವಿವಾಹಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತದೆ. ಆದರೂ ಕೂಡ ಇಂತಹ ತಾರತಮ್ಯದಿಂದ ಹೊರಬರಲು ಜನರಿಗೆ ಆಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದವಾರವಷ್ಟೇ ಮದುವೆಯಾದ ಚಿತ್ರದುರ್ಗದ ಪ್ರಕಾಶ್ ಮತ್ತು ಸಂಧ್ಯಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೌದು, ಕಳೆದ 2 ವರ್ಷಗಳಿಂದ ಪ್ರೀತಿಸಿ ಮೊನ್ನೆಯಷ್ಟೇ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದ ಪ್ರಕಾಶ್ ಹಾಗೂ ಸಂಧ್ಯಾಗೆ ಇದೀಗ ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಕೊಲೆ ಬೆದರಿಕೆಯಾಕಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಜ್ಜನಕೆರೆಗ್ರಾಮದ ಪ್ರಕಾಶ್, ಖಾಸಗಿ ಬಸ್ ಚಾಲಕರಾಗಿದ್ದು, ಬಸ್ನಲ್ಲಿ ಪಾವಗಡಕ್ಕೆ ತೆರೆಳುತ್ತಿದ್ದರು. ಆಗ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾಗೆ ಪ್ರಕಾಶ್ ಪರಿಚಯವಾಗಿ ಇಬ್ಬರು ಪರಸ್ಪರ ಮೆಚ್ಚಿಕೊಂಡು ಪ್ರೀತಿಸುತ್ತಿದ್ದರು. ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಹೀಗಾಗಿ ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು, ಪಾವಗಡದಿಂದ ಚಿತ್ರದುರ್ಗಕ್ಕೆ ಧಾವಿಸಿ, ಈ ನವದಂಪತಿಗಳಿಗೆ ಕೊಲೆಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಪ್ರಕಾಶ್ ಹಾಗೂ ಸಂಧ್ಯಾ ನಮಗೆ ಸೂಕ್ತ ರಕ್ಷಣೆ ಬೇಕು ಅಂತ ಚಿತ್ರದುರ್ಗ ಎಸ್ಪಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಲಾಲ್ಬಾಗ್ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ
ಮತ್ತೊಂದೆಡೆ ಪ್ರೀತಿಸಿದ ಹುಡುಗನಿಂದ ತಾಳಿ ಕಟ್ಟಿಸಿಕೊಂಡಿರುವ ಸಂಧ್ಯಾ, ಇದ್ದರೆ ಪ್ರಕಾಶ್ ಜೊತೆಗೆ ಇರುತ್ತೇನೆ. ಇಲ್ಲ ಪ್ರಾಣ ಬಿಡುತ್ತೇನೆ ಹೊರೆತು ಅವರೊಂದಿಗೆ ಹೋಗಲ್ಲ ಎನ್ನುತ್ತಿದ್ದಾರೆ. ಇನ್ನು ಸಂಧ್ಯಾಳನ್ನು ಸೊಸೆ ಎಂದು ಆಸೆಯಿಂದ ಒಪ್ಪಿಕೊಂಡಿರುವ ಪ್ರಕಾಶ್ನ ತಾಯಿ ಪ್ರೀತಿಸಿ ಮದುವೆಯಾದ ಜೋಡಿಯನ್ನು ದೂರ ಮಾಡಬೇಡಿ ಅಂತ ಅಂಗಲಾಚಿದ್ದಾರೆ. ಇದನ್ನೂ ಓದಿ: ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ
ಒಟ್ಟಾರೆ ಪ್ರೀತಿಸಿದ ಪ್ರೇಮಿಗಳು ಧೈರ್ಯಮಾಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಪೋಷಕರ ಬೆದರಿಕೆಗೆ ಬೆಚ್ಚಿರುವ ನವದಂಪತಿಗಳು ತಮ್ಮ ಜೀವ ರಕ್ಷಣೆಗಾಗಿ ಚಿತ್ರದುರ್ಗ ಪೊಲಿಸರ ಮೊರೆಗೆ ಧಾವಿಸಿದ್ದಾರೆ. ಸೂಕ್ತ ಭದ್ರತೆ ಒದಗಿಸಿ, ಅವರ ಹೊಸಬದುಕು ಅವಕಾಶ ಕಲ್ಪಿಸಬೇಕಿದೆ.