ಬಳ್ಳಾರಿ: ವಧು-ವರನ ಮೈಮೇಲಿನ ಅರಿಶಿಣ ಆರುವ ಮುನ್ನವೇ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿರುವ ಹೃದಯವಿದ್ರಾವಕ ಘಟನೆಯೊಂದು ಜರುಗಿದೆ.
ಬಳ್ಳಾರಿ ಜಿಲ್ಲೆಯ ಹಾರಕಬಾವಿ ಗ್ರಾಮದ ಕಾಂತೇಶ್ ಎನ್ನುವವರಿಗೆ ಸೋಮವಾರ ಜಗಳೂರು ತಾಲೂಕಿನ ಕೊಡದಗುಡ್ಡದಲ್ಲಿ ವಿವಾಹವಾಗಿತ್ತು. ಇಂದು ವಧುವಿನ ಊರಾದ ಹೊಸಕೆರೆಯಿಂದ ಉಜ್ಜಯಿನಿ ಸಮೀಪದ ವರನ ಸ್ವಗ್ರಾಮ ಹಾರಕಬಾವಿಗೆ ಆಗಮಿಸುವಾಗ ದಾರಿ ಮಧ್ಯೆ ಕಾರು ಅಪಘಾತವಾಗಿದೆ.
ಈ ಅಪಘಾತದಲ್ಲಿ ಮಧುಮಗ ಕಾಂತೇಶ್ ಎಸ್.ವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ವಧು ಸ್ಥಿತಿ ಚಿಂತಾಜನಕವಾಗಿದೆ. ಈ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಉಭಯ ಮನೆಗಳಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಈ ದುರ್ಘಟನೆಯಿಂದಾಗಿ ಇಡೀ ಹಾರಕಬಾವಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಈ ಘಟನೆ ದಾವಣಗೆರೆಯ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.