ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಕೋಣನಕುಂಟೆ ಆದರ್ಶ ನಗರದಲ್ಲಿ ನಡೆದಿದೆ.
ಪಲ್ಲವಿ (24) ಮೃತ ದುರ್ದೈವಿ. ಪಲ್ಲವಿ ಮೂಲತಃ ಬಂಗಾರಪೇಟೆಯ ನಿವಾಸಿ ಆಗಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ನವೀನ್ ಎಂಬವರನ್ನು ಮದುವೆ ಆಗಿದ್ದರು.
ಮನೆಯಲ್ಲಿ ಯಾರು ಇಲ್ಲದ ವೇಳೆ ಪಲ್ಲವಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಪಲ್ಲವಿಯ ಪೋಷಕರು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಪಲ್ಲವಿಯ ತಂದೆ, “ನಾನು ಗಾರೆ ಕೆಲಸ ಮಾಡಿ ಆಕೆಯನ್ನು ಓದಿಸಿ ಈ ಮನೆಗೆ ಮದುವೆ ಮಾಡಿಕೊಟ್ಟೆ. ಆದರೆ ಪತಿಯ ಮನೆಯವರು ಪಲ್ಲವಿಗೆ ಆಗಾಗ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ನಾನು ಕೊಡಿಸುತ್ತೇನೆ ಎಂದರು ಆಕೆ ಬೇಡ ಎಂದು ಹೇಳುತ್ತಿದ್ದಳು. ಹಣಕ್ಕಾಗಿ ನನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ. ನಾನೇ ಒಂದು ಬಾರಿ ಅವರಿಗೆ ಹಣ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಪಲ್ಲವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂದು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.