ಹೈದರಾಬಾದ್: ಬಲವಂತದ ಮದುವೆಯಿಂದಾಗಿ 19 ವರ್ಷದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರಾಮ ಸಮುದ್ರಂನಲ್ಲಿ ನಡೆದಿದೆ.
ಟಿ. ಸರಸ್ವತಿ (19) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಸರಸ್ವತಿ ಮೂರು ದಿನಗಳ ಹಿಂದೆಯಷ್ಟೆ ಜಗದೀಶ್ ಎಂಬವರ ಜೊತೆ ಮದುವೆಯಾಗಿತ್ತು. ಆದರೆ ಸರಸ್ವತಿಗೆ ಈ ಮದುವೆ ಇಷ್ಟವಿರಲಿಲ್ಲ. ಇದರಿಂದ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಏನಿದು ಪ್ರಕರಣ
ಮೃತ ಸರಸ್ವತಿ ಶುಕ್ರವಾರ ಪತಿ ಜಗದೀಶ್ ಮನೆಗೆ ಹೋಗಿದ್ದಾಳೆ. ಅಂದು ಸುಮಾರು ರಾತ್ರಿ 8 ಗಂಟೆಗೆ ಮನೆಯವರೆಲ್ಲಾ ಮಾತನಾಡಿಕೊಂಡು ಕುಳಿತಿದ್ದರು. ಈ ವೇಳೆ ಸರಸ್ವತಿ ಶೌಚಾಲಯಕ್ಕೆ ಹೋಗಬೇಕು ಎಂದು ಹೋಗಿದ್ದಾಳೆ. ಆದರೆ ಅಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ನಂತರ ಸರಸ್ವತಿ ಚೀರಾಡಿದ್ದಾಳೆ. ಇದನ್ನು ಕೇಳಿಸಿಕೊಂಡು ಕುಟುಂಬ ಸದಸ್ಯರು ತಕ್ಷಣ ಅವಳನ್ನು ರಕ್ಷಿಸಿ ಪುಂಗೂನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಸ್ವತಿ ಮೃತಪಟ್ಟಿದ್ದಾಳೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಎಸ್ಐ ಶಿವ ಶಂಕರ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸರಸ್ವತಿಗೆ ಇಷ್ಟವಿಲ್ಲದ ಮದುವೆ ಮಾಡಿಸಿದ್ದರು. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv