ಹೈದರಾಬಾದ್: ಮದುವೆಯಾದ ಮೂರು ತಿಂಗಳಿಗೆ ನವವಿವಾಹಿತೆಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಜಮ್ಮಲಮಡುಗು ನಗರದಲ್ಲಿ ನಡೆದಿದೆ.
ಮಾಬುಚಾನ್ ಮೃತ ನವವಿವಾಹಿತೆ. ಪತಿ ಇಮ್ತಿಯಾಜ್ ವರದಕ್ಷಿಣೆಗಾಗಿ ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾನೆ ಎಂದು ಮೃತ ಮಾಬುಚಾನ್ ಪೋಷಕರು ಆರೋಪಿಸಿದ್ದಾರೆ.
ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಸಿ ಮದುವೆಯಾಗಲು ನಿರ್ಧಸಿದ್ದರು. ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿದು ಪೋಷಕರು ಎಚ್ಚರಿಕೆ ಸಹ ನೀಡಿದ್ದರು. ಆದರೆ ಪೋಷಕರ ವಿರೋಧದ ನಡುವೆಯೂ ಇಬ್ಬರು ವಿವಾಹವಾಗಲು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ಈ ಬಗ್ಗೆ ಪೋಷಕರು ತಿಳಿದುಕೊಂಡು ಎರಡು ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಫೆಬ್ರವರಿ 8 ರಂದು ಮದುವೆ ಮಾಡಿಸಿದ್ದರು.
ಮದುವೆ ಸಂದರ್ಭದಲ್ಲಿ ಮೃತ ಮಾಬುಚಾನ್ ಪೋಷಕರು ವರದಕ್ಷಿಣೆಯಾಗಿ 10 ತೊಲಾ ಬಂಗಾರ ಮತ್ತು ನಗದು ಹಣವನ್ನು ನೀಡಿದ್ದರು. ಮದುವೆ ನಂತರ ಪತಿ, ಮಾವ ಬಾಶ್ಮಾಹುದ್ದಿನ ಮತ್ತು ಚಿಕ್ಕಮ್ಮ ಹಬೀಬೂನ್ ವರದಕ್ಷಿಣೆ ತರುವಂತೆ ಹಿಂಸೆ ನೀಡಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ವರದಕ್ಷಿಣೆ ತರಲು ಮಗಳಿಗೆ ಹಿಂಸೆ ನೀಡುವುದನ್ನು ನೋಡಲು ಸಾಧ್ಯವಾಗದೆ 50 ಸಾವಿರ ರೂ. ಹೆಚ್ಚುವರಿ ನಗದು ನೀಡಿದ್ದಾರೆ. ಆದರೆ ಬಳಿಕವೂ ಪತಿಯ ಮನೆಯವರು ಮತ್ತೆ ಹಣ ತರುವಂತೆ ಬಲವಂತ ಮಾಡಿದ್ದು, ಇದಕ್ಕೆ ವಿರೋಧಿಸಿದ್ದಕ್ಕೆ ಮಾಬುಚಾನ್ ಮೇಲೆ ಹಲ್ಲೆ ಮಾಡಿ ಕೊಂದು ಬಳಿಕ ನೇಣು ಬಿಗಿದಿದ್ದಾರೆ. ರಾತ್ರಿ ನಾವು ಮನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಮ್ಮ ಮಗಳ ಮೃತ ದೇಹ ಪತ್ತೆಯಾಗಿದೆ ಎಂದು ಮೃತಾಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ಈ ಘಟನೆ ಸಂಬಂಧ ಜಮ್ಮಲಮಡುಗು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.