ಹಾಸನ: ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳದಿಂದ ಮನನೊಂದು ನವವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ ಚನ್ನರಾಯಪಟ್ಟಣದ (Channarayapatna) ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕಿರಣ್ ಬಿ.ಬಿ (26) ಎಂದು ಗುರುತಿಸಲಾಗಿದೆ. ಆತ ಉದಯಪುರದಲ್ಲಿ ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಸ್ಪಂದನಾ ಕಿರಣ್ನೊಂದಿಗೆ ಸಂಸಾರ ನಡೆಸದೇ ತವರು ಮನೆ ಸೇರಿದ್ದಳು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಅಲ್ಲದೇ ಮೂವರು ಸೇರಿ ಕಿರಣ್ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಎಕ್ಸ್ಪ್ರೆಸ್ವೆಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್
ಕಿರಣ್ ಹಣ ನೀಡದೇ ಇದ್ದಾಗ ಜು.2 ರಂದು ಸ್ಪಂದನಾ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ಬಳಿಕ ಕಿರಣ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಳೆದ ಎರಡು ದಿನಗಳ ಹಿಂದೆ ಸ್ಪಂದನಾಳ ಪೋಷಕರು ಬೇಕರಿ ಬಳಿ ಬಂದು ಆತನೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದು ಕಿರಣ್ ಜು.31 ರಂದು ಮನೆಯಿಂದ ಹೊರ ಹೋದವನು ವಾಪಸ್ ಬಂದಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ನಾಪತ್ತೆಯಾಗಿದ್ದ ಆತನನ್ನು ಪೋಷಕರು ಹುಡುಕಾಡಿದಾಗ ಗ್ರಾಮದ ದೂಳಪ್ಪ ಎಂಬುವವರ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಹೊಳೇನರಸೀಪುರ (Holenarasipura) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್ನಲ್ಲಿ ಭಾರೀ ವಂಚನೆ
Web Stories