ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಯನ್ನು ಸದ್ಯ ದೇಶಾದ್ಯಂತ ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಎನ್ಆರ್ಸಿ ಜಾರಿ ತರುವ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. 2003ರ ಪೌರತ್ವ ನಿಯಮಗಳ ಅನುಗುಣವಾಗಿ ಎನ್ಆರ್ಸಿ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ನಿಯಮಗಳನ್ನು ರೂಪಿಸಿದ ಮೇಲೆ ಜಾರಿ ತರುವ ಬಗ್ಗೆ ತಿಳಿಸಲಾಗುವುದು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದ್ಯಾಂತ ಎನ್ಆರ್ಸಿ ಜಾರಿ ತರುವ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಸಂಬಂಧ ನಿಯಮಗಳನ್ನು ರೂಪಿಸುತ್ತಿದ್ದೇವೆ. ಆದರೆ ಎನ್ಆರ್ಸಿ ಜಾರಿಗೆ ಯಾವುದೇ ದಿನಾಂಕ ಇದುವರೆಗೂ ನಿಗದಿ ಮಾಡಿಲ್ಲ. ಎನ್ಆರ್ಸಿ ಶೀಘ್ರದಲ್ಲಿ ಜಾರಿ ಆಗುವುದಿಲ್ಲ. ಸೂಕ್ತ ಸಮಯ ನೋಡಿಕೊಂಡು ಜಾರಿ ಮಾಡಲಿದ್ದೇವೆ ಎಂದರು.
ಎನ್ಆರ್ಸಿ ಮೂಲಕ ದೇಶದ ಎಲ್ಲ ಮುಸ್ಲಿಮರನ್ನು ಹೊರ ಹಾಕಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆ, ಕಿರುಕುಳ ಆಗುವುದಿಲ್ಲ ಎಂದು ಕಿಶನ್ ರೆಡ್ಡಿ ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಒಡಿಶಾದಲ್ಲಿ ನವೀನ್ ಪಟ್ನಾಯಕ್ ತಮ್ಮ ರಾಜ್ಯದಲ್ಲಿ ಎನ್ಆರ್ಸಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2011 ಮತ್ತು 2015 ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಪ್ರಕ್ರಿಯೆ ನಡೆಸಿದೆ. ಏಪ್ರಿಲ್ ಸೆಪ್ಟೆಂಬರ್ 2020 ರಿಂದ 2021 ರಾಷ್ಟ್ರೀಯ ಜನಸಂಖ್ಯಾ ನೊಂದಣಿಯೂ ಎನ್ಆರ್ಸಿ ನಿಯಮಗಳ ಅಡಿಯಲ್ಲಿ ನಡೆಯಬೇಕು ಎಂದರು.