ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿ 67 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದ್ದ ಕಾಂಗ್ರೆಸ್ ಕೆಲ ನಾಯಕರ ತಲೆ ದಂಡಕ್ಕೆ ಮುಂದಾಗಿದೆ. ದೆಹಲಿ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಪಿ.ಸಿ ಚಾಕೋ ರಾಜೀನಾಮೆ ನೀಡುವ ಮೂಲಕ ಇದಕ್ಕೆ ಮುನ್ನುಡಿ ಬರೆದಿದ್ದಾರೆ.
2ನೇ ಬಾರಿಗೆ ಅತ್ಯಂತ ಹಳೆ ಪಕ್ಷವಾದ ಕಾಂಗ್ರೆಸ್ ಶೂನ್ಯ ಫಲಿತಾಂಶ ಪಡೆದಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಸೋಲಿಗೆ ಕಾರಣ ಹುಡುಕುವುದರ ಜೊತೆಗೆ ದೆಹಲಿ ಕಾಂಗ್ರೆಸ್ ಘಟಕದಲ್ಲಿ ಭಾರಿ ಬದಲಾವಣೆ ತರಲಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಶೀಲಾ ದೀಕ್ಷಿತ್ ನಂತರ ದೆಹಲಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ವಿಫಲವಾಗಿರುವುದು ಕೂಡ ಚರ್ಚೆಗೆ ಒಳಪಟ್ಟಿದ್ದು, ಸೋಲಿಗೆ ಕಾರಣ ಹುಡುಕಲು ಕಾಂಗ್ರೆಸ್ ಮುಂದಾಗಿದೆ.
PC Chacko, Congress on #DelhiResults2020: The downfall of the Congress party started in 2013 when Sheila ji was the CM. The emergence of a new party AAP took away the entire Congress vote bank. We could never get it back. It still remains with AAP. pic.twitter.com/aIpjSqz6bd
— ANI (@ANI) February 12, 2020
ದೆಹಲಿ ಉಸ್ತುವಾರಿ ವಹಿಸಿಕೊಂಡಿದ್ದ ಪಿ.ಸಿ ಚಾಕೋ ಅವರಿಂದ ಪಕ್ಷಕ್ಕೆ ಸೋಲಾಯಿತು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಸೋಲಿಗೆ ಕಾರಣ ಏನು ಎಂದು ಹುಡುಕಿ ತಳಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಸೋಲಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ. ಸಿದ್ಧಾಂತ ಬಿಟ್ಟುಕೊಡದೆ ಪಕ್ಷವನ್ನು ಕಟ್ಟುತ್ತೇವೆ. ಕೆಲವೊಂದು ತ್ಯಾಗ ಮಾಡಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.