ಚಿಕ್ಕಬಳ್ಳಾಪುರ: ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಹೋಂ ಸ್ಟೇ ಮೇಲೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ 8 ಮಂದಿ ಆರೋಪಿಗಳಿಗೂ ಚಿಕ್ಕಬಳ್ಳಾಪುರ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರಾಗಿದೆ.
ಕಳೆದ ರಾತ್ರಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಚಿಕ್ಕಬಳ್ಳಾಪುರ ತಾಲೂಕು ಅಗಲಗುರ್ಕಿ ಗ್ರಾಮದ ಬಳಿಯ ವೈಟ್ ನಿರ್ವಾಣ್ ಜೇಡ್ ಹೋಂ ಸ್ಟೇನಲ್ಲಿ ತಡರಾತ್ರಿ ಬೆಂಗಳೂರು ಮೂಲದ ಪ್ರತಿಷ್ಠಿತರ ಮಕ್ಕಳು ಪಾರ್ಟಿ ಮಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಸಿಪಿಐ ಹಾಗೂ ಸಿಬ್ಬಂದಿ ದಾಳಿ ಮಾಡಿ ಪಾರ್ಟಿ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಸಮಯದಲ್ಲಿ ಪಾನಮತ್ತರಾಗಿದ್ದ ಆರೋಪಿತರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು
ಪರಸ್ಪರರು ತಳ್ಳಾಟ, ನೂಕಾಟ ನಡೆಸಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬೆಂಗಳೂರು ಮೂಲದ ರಘು ವಂಶ್ ಕನೂಜ್, ಅಕ್ಷಯ್ ಬಜಾಜ್, ತೇಜಸ್, ಆಕಾಶ್, ಆದಿತ್ಯ, ಚಿರಾಗ್, ಸೂರಜ್, ಅರ್ಜುನ್ ಆರೋಪಿತರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷೆನ್ 353, 323, 504 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-188, 269, 272 ಅಡಿ ಪ್ರಕರಣ ದಾಖಲಿಸಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ