ಚಾಮರಾಜನಗರ: ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆ ಪ್ಲಾನ್ ಒಂದನ್ನು ಮಾಡಿದ್ದು, ಈ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಸಿಂಪಡಣೆ ಮಡಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಅರಣ್ಯಾಧಿಕಾರಿಗಳು ಈ ಹೊಸ ತಂತ್ರ ರೂಪಿಸಿದ್ದಾರೆ. ಬಂಡೀಪುರ ಮೂಲಕ ಹಾದು ಹೋಗುವ ರಸ್ತೆ ಬದಿಯಲ್ಲಿ ಟ್ಯಾಂಕರ್ ಮೂಲಕ ನೀರಿನ ಸಿಂಪಡಣೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 65ಎ ಭಾಗದಲ್ಲಿ ನೀರಿನ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಂಡೀಪುರ ಬೇಸಿಗೆ ಬಿಸಿಯಿಂದ ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕದಲ್ಲಿ ಹುಲ್ಲು ಹಸಿರಾಗಿ ಬೆಳೆಯಲಿ ಆ ಮೂಲಕ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ.
ಕಳೆದ ವರ್ಷ ಬಂಡೀಪುರದಲ್ಲಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಮೂರುವರೆ ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು.ಇದರಿಂದ ಹೆಚ್ಚೆತ್ತಿರೋ ಅರಣ್ಯಾಧಿಕಾರಿಗಳು ಬೇಸಿಗೆಯಲ್ಲಿ ಬೆಂಕಿ ನಿಯಂತ್ರಣಕ್ಕೆ ಈಗಾಗ್ಲೇ ಹಲವು ತಂತ್ರಗಳನ್ನು ಪ್ರಯೋಗಿಸಿದ್ದು, ಅದರ ಒಂದು ಭಾಗವಾಗಿ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಸಿಂಪಡಣೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ.