– ನಾಲ್ವರು ಶಾಸಕರ ಮಾತಿಗೆ ಸರ್ಕಾರದಲ್ಲಿ ಕಿಮ್ಮತ್ತಿಲ್ಲ
ಚಿತ್ರದುರ್ಗ: ಜಿಲ್ಲೆಯ ನೂತನ ಎಸ್ಪಿಯಾಗಿ ರಾಧಿಕಾ ನೇಮಕಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಶಾಸಕರ ವಿರೋಧದ ನಡುವೆಯೂ ರಾಧಿಕಾ ಅವರನ್ನು ಸರ್ಕಾರ ನೇಮಿಸಿದ್ದು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಿ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಶಾಸಕರ ಮಾತಿಗೆ ಸರ್ಕಾರ ಸೊಪ್ಪು ಹಾಕಿಲ್ಲ ಅಂತ ತೀವ್ರ ಗರಂ ಆಗಿರುವ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ ಶೇಖರ್, ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ ಹೊಸದುರ್ಗ ಕ್ಷೇತ್ರದ ವಾಟ್ಸಪ್ ಗ್ರೂಪ್ಗಳಲ್ಲಿ ಮೆಸೇಜ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಾಲ್ಕು ಜನ ಶಾಸಕರ ದೌರ್ಭಾಗ್ಯ ಹಾಗೂ ಶಾಸಕರು ಹೇಳಿದರೂ ಕೇಳದ ಸರ್ಕಾರ ಅಂತ ಅಸಮಾಧಾನ ಅಂತ ವಾಟ್ಸಪ್ ನಲ್ಲಿ ಮೊಬೈಲ್ ಸ್ಟೇಟಸ್ ಹಾಕಿಕೊಂಡು ನೇರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಶಾಸಕ ಗೂಳಿಹಟ್ಟಿ, ಚಿತ್ರದುರ್ಗ ಜಿಲ್ಲೆಯ ನಾಲ್ಕು ಜನ ಶಾಸಕರ ಮಾತಿಗೆ ಈ ಸರ್ಕಾರದಲ್ಲಿ ಕಿಮ್ಮತ್ತಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದವರಿಗೆ ಹೆಚ್ಚು ಬೆಲೆ ಇದೆ. ಹಾಗೆಯೇ ನಮ್ಮ ಜಿಲ್ಲೆ ಪ್ರಯೋಗಾತ್ಮಕ ಜಿಲ್ಲೆಯಾಗಿದ್ದು, ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳಿಗೆ ಪ್ರಯೋಗಾತ್ಮಕ ಜಿಲ್ಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಜಿಲ್ಲೆಯ ನಾಲ್ಕು ಜನ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮ, ಚಂದ್ರಪ್ಪ ಹಾಗೂ ನಾನು ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ರು ಸಹ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಒಗ್ಗಟ್ಟಾಗುತ್ತಿದ್ದೆವು. ಹೀಗಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಎಸ್ಪಿಯನ್ನು ನೇಮಿಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಬಲವಂತವಾಗಿ ನಮ್ಮಿಂದ ಎಸ್ಪಿ ರಾಧಿಕಾ ನೇಮಕಕ್ಕೆ ಪತ್ರ ತೆಗೆದುಕೊಂಡಿದ್ದು, ಹಿರಿಯೂರಿನ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿಯನ್ನು ಎಸ್ಪಿಯಾಗಿ ನೇಮಿಸಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಓಬವ್ವನ ನಾಡಲ್ಲಿ ಮಹಿಳೆಯರ ಆಡಳಿತ- ಮಹಿಳಾಮಣಿಗಳ ಕೈಯಲ್ಲಿ ಜಿಲ್ಲೆಯ ಚುಕ್ಕಾಣಿ
ಈ ಹಿಂದೆ ಮರಳು ದಂಧೆ ವಿಚಾರವಾಗಿ ನಮ್ಮ ಮತದಾರರಿಗಾಗಿ ಸಾಯಲು ಸಿದ್ಧವಾಗಿದ್ದವನು ನಾನು. ಆದರೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ನಾಯಕರ ಸಂಬಂಧಿ ಎಸ್ಪಿಯಾಗಿರೋದು ಎಲ್ಲೋ ಒಂದು ಕಡೆ ದೌರ್ಜನ್ಯ ಮತ್ತೆ ಮುಂದುವರಿಯುವ ಭೀತಿ ಕಾಡುತ್ತಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಿಎಂ ಬಳಿ ಮತ್ತೆ ಎಸ್ಪಿ ಬದಲಾವಣೆಗೆ ಮನವಿ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ಕೆಂಡಂಮಡಲವಾದ ಶಾಸಕ ಶೇಖರ್, ಇನ್ಮುಂದೆ ಸಿಎಂ ಬಿಎಸ್ವೈ ಅವರನ್ನು ಮನವಿ ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರದಲ್ಲಿ ನಮ್ಮ ಮನವಿಗೆ ಬೆಲೆ ಇಲ್ಲ. ನೋಡೋಣ ಮುಂದೆ ಏನಾಗುತ್ತೆ, ಜಸ್ಟ್ ವೈಟ್ ಆ್ಯಂಡ್ ಸಿ ಅಷ್ಟೇ ಎನ್ನುವ ಮೂಲಕ ಅವರ ಮುಂದಿನ ನಡೆಯ ಬಗ್ಗೆ ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.