-ಪಥಗಳಲ್ಲಿ ವಾಹನ ಕಾಯುವಿಕೆಗೆ ಸಮಯ ನಿಗದಿ
-ಹೆಚ್ಚು ಕಾಲ ನಿಲುಗಡೆ ಮಾಡುವ ವಾಹನಗಳಿಗೆ ದಂಡ ಪ್ರಯೋಗ
ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು ಮತ್ತು ಒಟ್ಟಾರೆ ಅನುಕೂಲತೆಯನ್ನು ಸುಧಾರಿಸಲು ಇದೇ ಡಿ.8ರಿಂದ ವರ್ಧಿತ ಪಿಕಪ್ ನಿಯಮಗಳನ್ನು ಪರಿಚಯಿಸುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೇಗವಾಗಿ ಬೆಳೆಯುತ್ತಿರುವ ಹಾಗೂ ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1,30,000 ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 1,00,000 ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್ಗಳ ಮುಂಭಾಗ ಇರುವ ಕರ್ಬ್ಸೈಡ್ನಲ್ಲಿ (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ವಿಮಾನ ನಿಲ್ದಾಣವು ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ, ದಟ್ಟಣೆಯನ್ನು ಸರಾಗಗೊಳಿಸುವ, ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಹೆಜ್ಜೆ ಇಟ್ಟಿದೆ.ಇದನ್ನೂ ಓದಿ: ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ, ಡಿಲೀಟ್ ಮಾಡಬಹುದು: ಸಿಂಧಿಯಾ ಸ್ಪಷ್ಟನೆ
ಇನ್ನು ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಬರುವ ಖಾಸಗಿ ಕಾರುಗಳು ಮತ್ತು ಕ್ಯಾಬ್ಗಳು ಪಥಗಳಲ್ಲಿ ದೀರ್ಘಕಾಲ ಕಾಯುವಿಕೆಯಿಂದ ಕೃತಕ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಇದರಿಂದ ಕಾಲ್ನಡಿಗೆಯಿಂದ ವಿಮಾನ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಮತ್ತು ಚಾಲಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಬಿಐಎಎಲ್ ಶಿಸ್ತುಬದ್ಧ ನಿಯಮ ಜಾರಿಗೊಳಿಸುತ್ತಿದೆ. ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಪ್ರತ್ಯೇಕ ಪಥ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಇದು ಕರ್ಬ್ಸೈಡ್ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ, ಟರ್ಮಿನಲ್ಗಳ ಮುಂದೆ ಪಿಕ್-ಅಪ್ ವಲಯದ ದುರುಪಯೋಗವನ್ನು ತಡೆಯಬಹುದಾಗಿದೆ.
ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟಿ1 ಮತ್ತು ಟಿ2ನಲ್ಲಿ ನಿಗದಿಪಡಿಸಿದ ಆಗಮನ ಪಿಕ್-ಅಪ್ ವಲಯಕ್ಕೆ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ. ಆದರೆ ನಿಗದಿತ ಸಮಯದ ಮಿತಿಯನ್ನು ಮೀರಿದರೆ ಅಂತಹ ವಾಹನಗಳ ಮೇಲೆ ಹೆಚ್ಚು ಕಾಲ ನಿಲ್ಲಿಸಿ, ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ವಿಮಾನ ನಿಲ್ದಾಣವು ವಲಯದಲ್ಲಿ ಉಚಿತ ವಾಹನ ನಿಲುಗಡೆಯ ಅವಕಾಶವನ್ನು 8 ನಿಮಿಷಗಳ ಕಾಲ (ಅಂತಾರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿನದು) ನೀಡುತ್ತದೆ. ಅದನ್ನು ಮೀರಿದ ಎಲ್ಲಾ ವಾಹನ ಬಳಕೆದಾರರಿಗೆ 8-13 ನಿಮಿಷಗಳ ಕಾಲ ಉಳಿಯಲು 150 ರೂ. ಶುಲ್ಕ ಮತ್ತು 13-18 ನಿಮಿಷಗಳಿಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುತ್ತದೆ. ಇಲ್ಲಿ, ಅನ್ವಯವಾಗುವ ದಂಡ ಮತ್ತು ಟೋಯಿಂಗ್ ಶುಲ್ಕವನ್ನು ವಿಧಿಸುವುದು ಅನಿವಾರ್ಯವಾಗಿದೆ.
ಇನ್ನು ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕಾಗುತ್ತದೆ. ಸುಗಮ ಪಿಕ್-ಅಪ್ ಅನುಭವವನ್ನು ಒದಗಿಸಲು, ಪಾರ್ಕಿಂಗ್ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತವೆ. ಟರ್ಮಿನಲ್ 1ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು ಪಿ4 ಮತ್ತು ಪಿ3 ಪಾರ್ಕಿಂಗ್ ವಲಯಗಳಿಗೆ ತೆರಳಬೇಕು. ಆದರೆ ಟರ್ಮಿನಲ್ 2ಗೆ ಸೇವೆ ಸಲ್ಲಿಸುವ ವಾಹನಗಳನ್ನು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕಾಗುತ್ತದೆ.ಇದನ್ನೂ ಓದಿ: Haveri | ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ಮೆಕ್ಕೆಜೋಳದ ರಾಶಿ ಭಸ್ಮ
ಈ ಉಪಕ್ರಮದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಎಂ.ಡಿ. ಮತ್ತು ಸಿಇಒ ಹರಿ ಮರಾರ್, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹೆಚ್ಚಳ ಹೆಚ್ಚುತ್ತಲೇ ಇರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ಪ್ರಯಾಣಿಕರ ಸುರಕ್ಷತೆ, ಸುಗಮ ಆಗಮನ ಹಾಗೂ ನಿರ್ಗಮನಕ್ಕೆ ಸಹಕಾರಿಯಾಗಲಿದೆ. ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಹೊಸ ಪ್ರಕ್ರಿಯೆಯನ್ನು ಅನುಸರಿಸಿದಾಗ, ಅನುಭವವು ತ್ವರಿತ, ಸುರಕ್ಷಿತ ಮತ್ತು ಈ ಭಾಗದಲ್ಲಿ ಓಡಾಡುವ ಎಲ್ಲರಿಗೂ ಹೆಚ್ಚು ಅನುಕೂಲಕರವಾಗುತ್ತದೆ. ವಿಮಾನ ನಿಲ್ದಾಣದ ಅನುಭವವನ್ನು ಸುಗಮ ಮತ್ತು ಉತ್ತಮವಾಗಿ ಸಂಘಟಿತವಾಗಿಸುವಲ್ಲಿ ಎಲ್ಲಾ ಪಾಲುದಾರರ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಧಿಕೃತ ಕ್ಯಾಬ್ಗಳು, ಆಗಮನದ ದ್ವಾರ ಹಾಗೂ ನಿರ್ಗಮನ ರ್ಯಾಂಪ್ಗಳ ಹೊರಗೆ ದೀರ್ಘಕಾಲದ ನಿಲುಗಡೆಯಿಂದ ಹಾಗೂ ರಸ್ತೆಬದಿಯಲ್ಲೇ ಪಿಕ್-ಅಪ್ ಮಾಡಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆ ಪ್ರಮಾಣ ಹೆಚ್ಚುತ್ತಲೇ ಇತ್ತು. ಈ ನಡವಳಿಕೆ ಹೆಚ್ಚಾಗಿ ಜನದಟ್ಟಣೆ, ಪ್ರಯಾಣಿಕರ ಅನಾನುಕೂಲತೆ ಮತ್ತು ತಪ್ಪಿಸಬಹುದಾದ ವಿಳಂಬಗಳಿಗೆ ಕಾರಣವಾಗುತ್ತಿವೆ ಹಾಗೂ ಸುರಕ್ಷತಾ ಅಪಾಯಗಳನ್ನು ಉಂಟುಮಾಡುತ್ತಿದೆ. ಹೀಗಾಗಿ ಸುಗಮ ಮತ್ತು ಪ್ರಯಾಣಿಕ ಸ್ನೇಹಿ ಅನುಭವ ನೀಡಲು ಪ್ರಯಾಣಿಕರು ಮತ್ತು ಕ್ಯಾಬ್ ನಿರ್ವಾಹಕರು ನಿಗದಿಪಡಿಸಿದ ಪಿಕ್-ಅಪ್ ಪಾಯಿಂಟ್ಗಳು ಮತ್ತು ವಿಮಾನ ನಿಲ್ದಾಣ ಟ್ಯಾಕ್ಸಿ, ಉಬರ್, ಓಲಾ, ಕ್ವಿಕ್ ರೈಡ್, ಒಎಚ್ಎಂ ಎಲೆಕ್ಟ್ರಿಕ್ ಕ್ಯಾಬ್ಗಳು ಮತ್ತು ಡಬ್ಲ್ಯೂಟಿಐ ಕ್ಯಾಬ್ಗಳಂತಹ ಅಧಿಕೃತ ಪಿಕ್-ಅಪ್ ಪಾಯಿಂಟ್ಗಳನ್ನು ಮಾತ್ರ ಬಳಸಲು ಪ್ರೋತ್ಸಾಹಿಸಲಾಗುತ್ತದೆ. ಅನಧಿಕೃತ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು, ಪಥಗಳನ್ನು ನಿರ್ಬಂಧಿಸುವುದು ಅಥವಾ ಅನುಮತಿಸಲಾದ ಕಾಯುವ ಅವಧಿಯನ್ನು ಮೀರಿ ಉಳಿಯುವುದು ಸೇರಿದಂತೆ ಯಾವುದೇ ನಿಯಮ ಮೀರಿದ ನಡವಳಿಕೆಗೆ ದಂಡವನ್ನು ವಿಧಿಸಲು ಮುಂದಾಗಲಾಗಿದೆ. ಇದು ನಿಯಮ ಉಲ್ಲಂಘಿಸುವ ಎಲ್ಲಾ ಕ್ಯಾಬ್ ನಿರ್ವಾಹಕರು ಮತ್ತು ವ್ಯಕ್ತಿಗಳಿಗೆ ಅನ್ವಯಿಸಲಿದೆ.
ಈ ಕ್ರಮವು ವಿಮಾನ ನಿಲ್ದಾಣದ ದೊಡ್ಡ #BeCabWise ಅಥವಾ #ಜಾಣ್ಮೆಯಿಂದ ಕ್ಯಾಬ್ ಆರಿಸಿ ಉಪಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾಗಿದೆ. ಸುಧಾರಿತ ಜಾಗೃತಿ, ಮಾರ್ಗದರ್ಶನ, ಸ್ಪಷ್ಟವಾದ ಡಿಜಿಟಲ್ ಸಂಕೇತ ಮತ್ತು ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ಗಳೊಂದಿಗೆ ಸಮನ್ವಯದ ಮೂಲಕ ಸುರಕ್ಷಿತ ಮತ್ತು ಉತ್ತಮ-ನಿಯಂತ್ರಿತ ಪಿಕ್-ಅಪ್ ಕಾರ್ಯಾಚರಣೆಗಳನ್ನು ಬೆಳೆಸಲು ವಿನ್ಯಾಸಗೊಳಿಸಲಾಗಿದೆ. ವಾಹನಗಳ ಸಂಚಾರ ಸುಗಮವಾಗಿರುವ, ಪರಿವರ್ತನೆಯ ಸಮಯಗಳು ತ್ವರಿತವಾಗಿರುವ ಮತ್ತು ಬೋರ್ಡಿಂಗ್ ಪ್ರದೇಶಗಳು ಸಂಘಟಿತ ಮತ್ತು ಸುರಕ್ಷಿತವಾಗಿರುವಂತಹ ದಟ್ಟಣೆ-ಮುಕ್ತ ವಾತಾವರಣವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಪ್ರಯಾಣಿಕರ ಬೆಂಬಲ ವ್ಯವಸ್ಥೆಗಳಲ್ಲಿ ನಿರಂತರ ಹೂಡಿಕೆಗಳೊಂದಿಗೆ, ಬೆಂಗಳೂರು ವಿಮಾನ ನಿಲ್ದಾಣವು ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವ ದರ್ಜೆಯ ಪ್ರಯಾಣಿಕರ ಪ್ರಯಾಣವನ್ನು ಸಕ್ರಿಯಗೊಳಿಸಲು ಬದ್ಧವಾಗಿದೆ.ಇದನ್ನೂ ಓದಿ: ಸಂಪುಟ ಪುನಾರಚನೆ ಆದ್ರೆ ಮಹದೇವಪ್ಪ, ಪರಮೇಶ್ವರ್, ಮುನಿಯಪ್ಪಗೆ ಗೇಟ್ಪಾಸ್: ಛಲವಾದಿ ನಾರಾಯಣಸ್ವಾಮಿ



