ಬೆಂಗಳೂರು: ಕಾಂಗ್ರೆಸ್ (Congress) ಘೋಷಿಸಿದ್ದ ಐದು ಗ್ಯಾರಂಟಿಗಳಿಗೆ ಸರ್ಕಾರ ಷರತ್ತುಗಳನ್ನು ಹಾಕುತ್ತಿರುವುದಕ್ಕೆ ಈಗಾಗಲೇ ಬಿಜೆಪಿ (BJP) ವಿರೋಧ ವ್ಯಕ್ತಪಡಿಸಿತ್ತು. ಆದರೆ ಈಗ ಮತ್ತೆ ಅನ್ನಭಾಗ್ಯದ (Anna Baghya) ಹಣ ವರ್ಗಾವಣೆಗೆ ಹೊಸ ಷರತ್ತು ವಿಧಿಸಿದೆ.
ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿದ್ದರೆ ಅನ್ನಭಾಗ್ಯದ ನಗದು ವರ್ಗಾವಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಕುಟುಂಬಸ್ಥರು ಶೀಘ್ರವೇ ಮುಖ್ಯಸ್ಥರು ಯಾರು ಎನ್ನುವುದನ್ನು ನಿರ್ಧರಿಸಬೇಕು. ಅಲ್ಲದೇ ಹಿರಿಯ ಮಹಿಳೆಯನ್ನೇ ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎಂದು ಸರ್ಕಾರ ಹೊಸ ನಿಯಮ ವಿಧಿಸಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ – ಶಾಲೆಗಳಿಗೆ ರಜೆ ಘೋಷಣೆ
ಈಗಾಗಲೇ ಎರಡನೇ ಮುಖ್ಯಸ್ಥರ ಹೆಸರಿದ್ದರೆ ಆ ಹೆಸರನ್ನು ನಿಷ್ಕ್ರಿಯಗೊಳಿಸಬೇಕು. ನಂತರ ಈ ಮಾಹಿತಿ ಸಲ್ಲಿಸಿದ ಮೇಲೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಯ ಕುಟುಂಬಸ್ಥರಿಗೆ ಹಣ ವರ್ಗಾವಣೆ ಸೌಲಭ್ಯದಿಂದ ಹೊರಗಿರಿಸಲಾಗುತ್ತದೆ. ಕೂಡಲೇ ಇದನ್ನು ಸರಿ ಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಆಧಾರ್ ಸಂಖ್ಯೆ ಹಾಗೂ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿರುವ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ. ಆಧಾರ್ ಸಂಖ್ಯೆ ಲಿಂಕ್ ಮಾಡದವರಿಗೆ ಲಿಂಕ್ ಮಾಡಿಸುವಂತೆ ಉತ್ತೇಜಿಸಲಾಗುತ್ತದೆ. ತಾಂತ್ರಿಕ ಅಥವಾ ಆರೋಗ್ಯ ಕಾರಣಗಳಿಂದ ಆಧಾರ್ ಸಂಖ್ಯೆ ಪಡಿತರ ಚೀಟಿಯೊಂದಿಗೆ ಸೇರಿಸಲು ಸಾಧ್ಯವಾಗದೇ ಇರುವಂತಹ ಫಲಾನುಭವಿಗಳಿಗೆ ಇತರೆ ಮಾರ್ಗೋಪಾಯಗಳ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ.
ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ, ಖಾತೆಯನ್ನು ಚಾಲ್ತಿ ಮಾಡಿದ ಬಳಿಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ
Web Stories