ಬೆಂಗಳೂರು: ಮೈತ್ರಿ ಸಂಪುಟಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್.ಶಂಕರ್ ಹಾಗೂ ಎಚ್. ನಾಗೇಶ್ ಅವರಿಗೆ ಖಾತೆ ಹಂಚಿಕೆ ಮಾಡಿರುವ ಸರ್ಕಾರ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದೆ.
ನಿರೀಕ್ಷೆಯಂತೆ ಶಂಕರ್ ಅವರಿಗೆ ಪೌರಾಡಳಿತ ಖಾತೆ ಲಭಿಸಿದ್ದು, ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಹಿಂದೆ ಸಣ್ಣ ಕೈಗಾರಿಕೆ ಖಾತೆ ಗುಬ್ಬಿ ಶ್ರೀನಿವಾಸ್ ಅವರ ಬಳಿ ಇತ್ತು. ಸದ್ಯ ಅವರಿಂದ ಈ ಸಣ್ಣ ಕೈಗಾರಿಕೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿಗಳು ನಾಗೇಶ್ ಅವರಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ ಇದ್ದ ಪ್ರಾಥಮಿಕ ಶಿಕ್ಷಣ ಖಾತೆಯನ್ನ ಗುಬ್ಬಿ ಶ್ರೀನಿವಾಸ್ ಅವರಿಗೆ ನೀಡಿದ್ದಾರೆ.
ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ ಅವರ ನಿಧನದಿಂದ ಪೌರಾಡಳಿತ ಖಾತೆ ತೆರವಾಗಿತ್ತು. ಜೂನ್ 14 ರಂದು ಹಲವು ಗೊಂದಲಗಳ ನಡುವೆಯೂ ಪಕ್ಷೇತರ ಶಾಸಕರಾಗಿದ್ದ ಶಂಕರ್ ಹಾಗೂ ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.