ಮೈಸೂರು: ನಾಡಹಬ್ಬ ದಸರೆಗೆ ಮುನ್ನ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ವಿಶೇಷ ವಿಮಾನಗಳು ಹಾರಾಡಲಿವೆ. ಉಡೇ ದೇಶ್ ಕಾ ಆಮ್ ನಾಗರಿಕ್(ಉಡಾನ್) ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಸಂಪರ್ಕಕ್ಕೆ ನಿರ್ಧಾರ ಮಾಡಲಾಗಿದೆ.
ಸೆಪ್ಟೆಂಬರ್ ಮೊದಲ ವಾರದಿಂದ ವಿಮಾನಗಳು ತಮ್ಮ ಹಾರಾಟ ಆರಂಭಿಸಲಿವೆ. ಹಗಲಿನ ವೇಳೆಯಲ್ಲಿ ಒಂದು ರಾತ್ರಿ ವೇಳೆಯಲ್ಲಿ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ. ಹಗಲು ವೇಳೆ ಸಂಚರಿಸುವ ವಿಮಾನ ಒಟ್ಟು 72 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆ 19 ಆಸನ ಸಾಮರ್ಥ್ಯದ ವಿಮಾನ ಹಾರಟ ನಡೆಸಲಿದೆ.
ಸಮಯ ಹೀಗಿದೆ: ಬೆಳಗ್ಗೆ 10 ರಿಂದ 12 ಗಂಟೆ ಅವಧಿಯಲ್ಲಿ ಟ್ರೂಜೆಟ್ ಸಂಸ್ಥೆಯ ಒಂದು ವಿಮಾನ ಲಭ್ಯವಿರುತ್ತದೆ. ಇನ್ನೂ ರಾತ್ರಿ ವೇಳೆ 8.45 ರಿಂದ 9 ಗಂಟೆ ಅವಧಿಯಲ್ಲಿ ಏರ್ ಒಡಿಶಾ ಸಂಸ್ಥೆಯ ವಿಮಾನ ಲಭ್ಯವಿರುತ್ತದೆ. ಪ್ರತಿ ಪ್ರಯಾಣಕ್ಕೆ 2500 ರೂ.ಯನ್ನು ನಿಗದಿ ಮಾಡಲಾಗಿದೆ.
ಈ ವಿಶೇಷ ವಿಮಾನಯಾಣ ದಸರೆಯ ನಂತರ ಸ್ಥಗಿತಗೊಳ್ಳುವುದಿಲ್ಲ. ಉಡಾನ್ ಯೋಜನೆಯಡಿಯಲ್ಲಿ ಈ ಎರಡು ವಿಮಾನಗಳು 3 ವರ್ಷಗಳ ಕಾಲ ಹಾರಾಟ ನಡೆಸಲಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.