ನವದೆಹಲಿ: ಮೊದಲನೇ ಪತ್ನಿಯ ಮಕ್ಕಳ ವಿಚಾರಕ್ಕೆ ಜಗಳವಾಗಿ ಎರಡನೇ ಹೆಂಡತಿಯನ್ನು ಪತಿಯೋರ್ವ ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಪಶ್ಚಿಮ ದೆಹಲಿಯ ಮಡಿಪುರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ತಡರಾತ್ರಿ 4 ಗಂಟೆಗೆ ನಡೆದಿದ್ದು, ಕೊಲೆ ಮಾಡಿದ ಪತಿಯನ್ನು 39 ವರ್ಷದ ರಹೀಸುಲ್ ಅಜಮ್ ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ತನ್ನ ಎರಡನೇ ಪತ್ನಿ ಗುಲ್ಶನ್ ಅನ್ನು ದೊಣ್ಣೆಯಿಂದ ಹೊಡೆದು ಕೊಂದು ತಾನೇ ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡಿದ್ದಾನೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಪೊಲೀಸರು ನಮಗೆ ಸುಮಾರು ಬೆಳಗ್ಗಿನ ಜಾವ 3.56 ಸಮಯದಲ್ಲಿ ಒಂದು ಫೋನ್ ಬಂತು. ಅದರಂತೆ ನಾವು ಸ್ಥಳಕ್ಕೆ ಬಂದ ನೋಡಿದಾಗ ಗುಲ್ಶನ್ ಬರ್ಬರವಾಗಿ ಕೊಲೆಯಾಗಿದ್ದಳು. ಆಕೆಗೆ ಆತನ ಗಂಡ ರಹೀಸುಲ್ ಅಜಮ್ ದೊಣ್ಣೆಯಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಿದ್ದನು. ಜೊತೆಗೆ ಸ್ಥಳದಲ್ಲೇ ಇದ್ದ ಆತ ನಾನೇ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಆರೋಪಿ ಗುಲ್ಶನ್ ಅನ್ನು ಮೂರು ತಿಂಗಳ ಹಿಂದೆ ತಾನೇ ಮದುವೆಯಾಗಿದ್ದ. ಈ ಮದುವೆ ಈತನ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಯ ಮಕ್ಕಳ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ವಿಚಾರಕ್ಕೆ ಇಂದು ಕೂಡ ಗಲಾಟೆಯಾಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ರಹೀಸುಲ್ ಅಜಮ್ ದೊಣ್ಣೆಯಿಂದ ಗುಲ್ಶನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.