– ಉಜ್ವಲ ಭವಿಷ್ಯ ರೂಪಿಸಬೇಕಿದ್ದ ಶಾಲೆಗಳು ಅಗ್ನಿಗೆ ಆಹುತಿ
ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೋಮು ಘರ್ಷಣೆಗೆ ಇಳಿದ ಎರಡು ಗುಂಪುಗಳು ಅಕ್ಕಪಕ್ಕದಲ್ಲಿದ್ದ ಎರಡು ಖಾಸಗಿ ಶಾಲೆಗಳಿಗೆ ಬೆಂಕಿ ಹೊತ್ತಿಸಿದ್ದಾರೆ. ಪರಿಣಾಮ ಪರಸ್ಪರ ಅವರವರ ಮಕ್ಕಳ ಭವಿಷ್ಯಕ್ಕೆ ಅವರವರೇ ಕೊಳ್ಳಿ ಇಟ್ಟಿದ್ದಾರೆ.
ಶಿವ ವಿಹಾರ್ ನಲ್ಲಿರುವ ಫಾರುಕ್ ಒಡೆತನದ ರಾಜಧಾನಿ ಪಬ್ಲಿಕ್ ಸ್ಕೂಲ್ ಮತ್ತು ಹಿಂದೂ ಶರ್ಮಾ ಒಡೆತನದ ಡಿ.ಆರ್.ಪಿ ಶಾಲೆಗೆ ಉದ್ರಿಕ್ತ ಎರಡು ಕೋಮುಗಳು ಪರಸ್ಪರ ಬೆಂಕಿ ಹೊತ್ತಿಸಿದ್ದರು. ಘಟನೆಯಲ್ಲಿ ಡಿ.ಆರ್.ಪಿ ಶಾಲೆ ಸಂಪೂರ್ಣವಾಗಿ ಸುಟ್ಟರೇ, ರಾಜಧಾನಿ ಪಬ್ಲಿಕ್ ಸ್ಕೂಲ್ ಭಾಗಶಃ ಹಾನಿಯಾಗಿದ್ದು ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ.
ಪೂರ್ವ ನಿಯೋಜಿತ?
ಶಿವ ವಿವಾರ್ ನಲ್ಲಿ ನಡೆದ ಘಟನೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ದಾಳಿ ಮಾಡಲು ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡತೆ ಕಂಡು ಬಂದಿದೆ. ಹಾನಿಗೊಳಗಾದ ರಾಜಧಾನಿ ಪಬ್ಲಿಕ್ ಶಾಲೆಯ ಮಹಡಿ ಮೇಲೆ ಪೆಟ್ರೋಲ್ ಬಾಂಬ್, ಬುಲೆಟ್ ಹಾಗೂ ಕಲ್ಲು ಇಟ್ಟಿಗೆ ತುಂಬಿದ ಮೂಟೆಗಳ ರಾಶಿ ಕಂಡು ಬಂದಿದೆ. ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಈ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ದಾಳಿ ಮಾಡಿದಂತೆ ಗೋಚರಿಸಿದೆ.
ನಾಲ್ಕು ಅಂತಸ್ತಿನ ಈ ಶಾಲೆಯ ಛಾವಣಿಯಿಂದ ಸುತ್ತಲಿನ ಪ್ರದೇಶ ಮೇಲೆ ದಾಳಿ ನಡೆದಿದ್ದು ಎಲ್ಲ ಮನೆಗಳಿಗೂ ಪೆಟ್ರೋಲ್ ಬಾಂಬ್ಗಳ ಮೂಲಕ ಬೆಂಕಿ ಹಾಕಿದ್ದಾರೆ. ರಾಜಧಾನಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲೇ ಡಿ.ಆರ್.ಪಿ ಶಾಲೆ ಇದ್ದು ರಾಜಧಾನಿ ಶಾಲೆಯಿಂದ ಹಗ್ಗದ ಮೂಲಕ ಇಳಿಯಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರಾಜಧಾನಿ ಶಾಲೆಯಿಂದ ಹಗ್ಗದ ಸಹಾಯದಿಂದ ಡಿ.ಆರ್.ಪಿ ಶಾಲೆಯೊಳಗೆ ಇಳಿದು ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಡಿಆರ್ಪಿ ಶಾಲೆಗೆ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಇತ್ತ ರಾಜಧಾನಿ ಪಬ್ಲಿಕ್ ಸ್ಕೂಲ್ ಮೇಲೆ ಮತ್ತೊಂದು ಕೋಮು ದಾಳಿ ಮಾಡಿದೆ.
ಈ ಎರಡು ಕೋಮುಗಳ ನಡುವಿನ ಸಂಘರ್ಷ ಸುತ್ತಿಲಿನ ಮನೆಗಳು ಹಾಗೂ ವಾಹನಗಳ ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಆ ಎರಡು ಕೋಮುಗಳ ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕಿದ್ದ ಎರಡು ಶಾಲೆಗಳು ಸುಟ್ಟು ಹೋಗಿದೆ.