ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ, ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ಎಲ್ಲವೂ ಸಮಾಜಕ್ಕೆ ನೆಹರು ಕುಟುಂಬದ ಕೊಡುಗೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ, ಭಾರತ ಅತ್ಯಾಚಾರದ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. ನಕ್ಸಲಿಸಂ, ಭಯೋತ್ಪಾದನೆ, ಅತ್ಯಾಚಾರಗಳೆಲ್ಲ ನೆಹರು ಕುಟುಂಬದಿಂದಲೇ ಬಂದಿದ್ದು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಭಾರತ ವಿಶ್ವದ ಅತ್ಯಾಚಾರಗಳ ರಾಜಧಾನಿ: ರಾಹುಲ್ ಗಾಂಧಿ
ನಮ್ಮ ದೇಶ ರಾಮ, ಕೃಷ್ಣನಂತವರು ಜನಿಸಿದ ಪುಣ್ಯಭೂಮಿ. ರಾಹುಲ್ ಗಾಂಧಿ ಹೇಳಿರುವುದು ಸರಿಯಲ್ಲ. ರಾಮ ಮತ್ತು ಕೃಷ್ಣನ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಹಾಳು ಮಾಡಿದ ನೆಹರು ಅವರೇ ಅತಿ ದೊಡ್ಡ ಅತ್ಯಾಚಾರಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಖಂಡಿಸಿ ಧರಣಿ ನಡೆಸುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ಮಾಡಿದ ಪ್ರಾಚಿ ಅಖಿಲೇಶ್ ಅಧಿಕಾರದಲ್ಲಿದ್ದಾಗ ಅತ್ಯಾಚಾರಿಗಳನ್ನೆಲ್ಲ ಕಾಪಾಡಿ, ಈಗ ಪ್ರತಿಪಕ್ಷದಲ್ಲಿ ಇದ್ದೇನೆ ಎಂದು ಧರಣಿ ಮಾಡುತ್ತಿದ್ದಾರೆ ಎಂದರು.
ಹೈದರಾಬಾದ್ನ ಮಹಿಳಾ ಪಶುವೈದ್ಯಾಧಿಕಾರಿ ದಿಶಾ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ನಲ್ಲಿ ಕೊಂದ ಹೈದರಾಬಾದ್ ಪೊಲೀಸರನ್ನು ಸಾಧ್ವಿ ಪ್ರಾಚಿ ಶ್ಲಾಘಿಸಿದರು. ಉನ್ನಾವೋ ಸಂತ್ರಸ್ತೆಯ ಸಾವಿಗೆ ಕಾರಣವಾದವರ ಮೇಲೆ ಕೂಡ ಇದೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.